ಕಿನ್ನಿಗೋಳಿ : ಉರುಳಿಗೆ ಬಿದ್ದು ಚಿರತೆ ಸಾವು

ಉರುಳಿಗೆ ಬಿದ್ದ ಚಿರತೆ ಒದ್ದಾಡಿ ಮೃತ್ಯು

ಮಂಗಳೂರು: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡೆಯಲ್ಲಿ ಉರುಳಿಗೆ ಸಿಕ್ಕ ಚಿರತೆ ಒದ್ದಾಡಿ ಸಾವನ್ನಪ್ಪಿದ ಘಟನೆ ನಡೆದಿದೆ.

ಇಲ್ಲಿನ ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡೆಯಲ್ಲಿ ಸ್ಥಳೀಯರು ಇಟ್ಟಿದ್ದ ಉರುಳಿಗೆ ಆಹಾರ ಹುಡುಕಿ ಬಂದಿದ್ದ ಚಿರತೆ ರಾತ್ರಿ ಹೊತ್ತು ಬಿದ್ದಿದೆ ಎನ್ನಲಾಗಿದೆ. ಬೆಳಿಗ್ಗೆ ಸ್ಥಳೀಯ ಮನೆಯವರು ಗುಡ್ಡೆಯಲ್ಲಿ ನಾಯಿ ಬೊಗಳುವ ಶಬ್ದವನ್ನು ಕೇಳಿ ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ. ಒದ್ದಾಡಿ ನರಳಿದ ಚಿರತೆ ಸ್ಪಲ್ಪ ಸಮಯದಲ್ಲೇ ಪ್ರಾಣ ಬಿಟ್ಟಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.