ಉಡುಪಿ ವಿವಾದ: ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ - ಸಮಗ್ರ ತನಿಖೆಗೆ ಆಗ್ರಹ

ಪಿಎಫ್‌ಐ ನಂಟಿದೆ - ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಲ್ಲ ; ಶಾಸಕ ಯಶಪಾಲ್ ಸುವರ್ಣ

ಉಡುಪಿ: ಖಾಸಗಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಬಿಜೆಪಿವತಿಯಿಂದ ಸಮಗ್ರ ತನಿಖೆ ನಡೆಸುವಂತೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ’ ಮೂಲಕ ಉಡುಪಿ ಸಿಟಿ ಬಸ್ ನಿಲ್ದಾಣದ ಬನ್ನಂಜೆ ಎಸ್.ಪಿ. ಕಚೇರಿವರೆಗೆ ರ್‍ಯಾಲಿ ನಡೆಸಲಾಯಿತು.

ಬಳಿಕ ಪ್ರತಿಭಟನಾ ಸಭೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು. ಈ ವೇಳೆ ಜಿಲ್ಲಾ ಬಿಜೆಪಿ ಕಚೇರಿ ಬಳಿಯಿಂದ ಬನ್ನಂಜೆಯ ಎಸ್ಪಿ ಕಚೇರಿಯವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು.

ಇದೇ ಸಂಧರ್ಭದಲ್ಲಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, "ಪ್ರಕರಣದಲ್ಲಿ ಪಿಎಫ್‌ಐ ನಂಟು ಇದೆ. ಪಿಎಫ್‌ಐ ನಿಷೇಧದ ನಂತರ ಪಿಎಫ್‌ಐ ಮಹಿಳಾ ಘಟಕ ಸಕ್ರಿಯವಾಗಿರುವ ಬಗ್ಗೆ ಅನುಮಾನವಿದೆ. ಈ ವಿದ್ಯಾರ್ಥಿನಿಯರು ಈ ಕಾರ್ಯಾಚರಣೆಯ ಭಾಗವಾಗಿರಬಹುದು. ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಯ ಮೇಲೆ ನನಗೆ ವಿಶ್ವಾಸವಿಲ್ಲ. ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಬೇಕು . ಇಲ್ಲದಿದ್ದರೆ -ರಾಜ್ಯ ಸರ್ಕಾರದೊಂದಿಗೆ ಜಂಟಿ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದರು.