ಮಂಗಳೂರು: ಅಧಿಕಾರಿಗಳ ಶಾಮೀಲಿನಲ್ಲಿ ನಡೆಯುವ ಮರಳು ಮಾಫಿಯಾ.!

ಅಡ್ಡೂರು ಫಲ್ಗುಣಿ ನದಿಯಲ್ಲಿ ಮಿತಿಮೀರಿದ ಮರಳುಗಾರಿಕೆ

ಮಂಗಳೂರು: ನದಿ ತಟಕ್ಕೆ ಕಣ್ಣು ಹಾಯಿಸಿದರೆ 30 ರಿಂದ 40 ನಾಡದೋಣಿಗಳಲ್ಲಿ ಮರಳುಗಾರಿಕೆ. ಹಾಡು ಹಗಲಲ್ಲೇ ದಂಧೆಕೋರರ ಕೈಚಳಕ. ಕೈ ಕಟ್ಟಿ ಕುಳಿತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ.!

ನಮ್ಮ ನಾಡು, ಊರು ಕಾಪಾಡಲೆಂದು ಅಧಿಕಾರಿಗಳನ್ನು ನೇಮಿಸುತ್ತಾರೆ. ಆದರೆ ಹಣದ ಆಸೆಗೋ.. ಪ್ರಭಾವಿ ವ್ಯಕ್ತಿಗಳ ಭಯಕ್ಕೋ.. ಪ್ರಕೃತಿ ನಾಶಕ್ಕೆ ಅಧಿಕಾರಿಗಳೇ ಕಾರಣವಾದರೆ ಇದರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು.!? ಇಂತಹ ಘಟನೆ ಪೊಳಲಿ ಸಮೀಪದ ಅಡ್ಡೂರು ಬಳಿ ನಡೆಯುತ್ತಿದೆ. 

ಪೊಳಲಿ ಸಮೀಪದ ಅಡ್ಡೂರು ಫಲ್ಗುಣಿ ನದಿಯಲ್ಲಿ ಮರಳುಗಾರಿಕೆ ಮಿತಿಮೀರಿಯೇ ಸಾಗುತ್ತಿದೆ. ಪೊಳಲಿ ಅಡ್ಡೂರು ಸಂಪರ್ಕಿಸುವ ಸೇತುವೆ ಮೇಲೆ ನಿಂತು ಒಂದು ಕ್ಷಣ ಫಲ್ಗುಣಿ ನದಿ ತಟಕ್ಕೆ ಕಣ್ಣು ಹಾಯಿಸಿದರೆ ಸಾಕು, 30 ರಿಂದ 40 ನಾಡದೋಣಿಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುವುದು ಕಂಡುಬರುತ್ತದೆ. ಸೇತುವೆಯ ಎರಡೂ ಭಾಗದಲ್ಲಿ ಕೂಡ ಎಗ್ಗಿಲ್ಲದೆ ಮರಳುಗಾರಿಕೆ ಸಾಗುತ್ತಲೇ ಇದೆ. ರಾತ್ರಿಯಾಗುತ್ತಿದ್ದಂತೆ ನಾಡದೋಣಿಗಳು ನದಿಗಿಳಿದು ಹೊಯ್ಗೆ ತೆಗೆದು ಸಾಗಾಟ ನಡೆಸುವ ಕಾರ್ಯ ಮುಂಜಾನೆಯವರೆಗೂ ನಡೆಯುತ್ತದೆ. ಇದರ ಜೊತೆಗೆ ಆಶ್ಚರ್ಯವೇನೆಂದರೆ ಹಾಡು ಹಗಲಲ್ಲೇ ಮರಳು ಸಾಗಿಸುತ್ತಿರುವ ದಂಧೆಕೋರರ ಕೈಚಳಕ.

ಇದರ ವಿರುದ್ಧ ಯಾವ ಕ್ರಮವು ಜರಗಿಲ್ಲ. ಮಾಹಿತಿ ಇದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ ಅಂದರೆ ಇದು ಹಣದ, ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವುದು ಪಕ್ಕ ಎನ್ನಬಹುದು. ಹಾಗಾದರೆ ಅಧಿಕಾರಿಗಳು "ಹಣ ಕೊಟ್ಟರೆ ದೇಶ ಮಾರುತ್ತಾರೆ" ಎನ್ನುವ ಮಾತು ನಿಜ ಎನ್ನುವುದಕ್ಕೆ ಇದು ಕೂಡ ಒಂದು ಉದಾಹರಣೆ. ಯಾವ ಇಲಾಖೆಯನ್ನು ಕ್ಯಾರೇ ಎನ್ನದೆ ಆರಾಮಾಗಿ ಅಕ್ರಮ ಮರಳುಗಾರಿಕೆಯನ್ನು ಮಾಡುತ್ತಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೈ ಕಟ್ಟಿ ಕೂತಿರುವುದು ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕರು ಮಾಹಿತಿ ನೀಡಿದರು. ಮಾಧ್ಯಮಗಳಲ್ಲಿ ಅಕ್ರಮದ ಬಗ್ಗೆ ವರದಿ ಬಂದರು ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಾಗಾದ್ರೆ ಇದಕ್ಕೆ ಬ್ರೇಕ್ ಬೀಳೋದು ಹೇಗೆ.!?