ಮಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವಕ ಸಾವು.!

ಗುಂಡಿ ತಪ್ಪಿಸಲು ಹೋಗಿ ನಿಂತಿದ್ದ ಓಮ್ನಿಗೆ ಬೈಕ್‌ ಡಿಕ್ಕಿ - ಸವಾರ ಸಾವು

ಮಂಗಳೂರು: ಪ್ರಮೋದ್ ನರ್ಸರಿಯ ಇನ್‌ಫೆಂಟ್ ಜೀಸಸ್ ಚರ್ಚ್ ದ್ವಾರದ ಬಳಿ ತಡರಾತ್ರಿ ರಸ್ತೆ ಗುಂಡಿ ತಪ್ಪಿಸಲು ಹೋದ ಸಂದರ್ಭದಲ್ಲಿ ಬೈಕ್ ಮೇಲೆ ನಿಯಂತ್ರಣ ತಪ್ಪಿ ನಿಂತಿದ್ದ ಓಮ್ನಿ ವ್ಯಾನ್‌ಗೆ  ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಅಂಕಿತ್ ಜಿ ಎಂದು ಗುರುತಿಸಲಾಗಿದೆ.

ಅಂಕಿತ್‌ ತನ್ನ ಸ್ನೇಹಿತನನ್ನು ಕುಲಶೇಖರ್‌ಗೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಬಿಕ್ಕರ್ನಕಟ್ಟೆಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಮುಖ್ಯ ದ್ವಾರ ತಲುಪುತ್ತಿದ್ದಂತೆ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ನಿಂತಿದ್ದ ಓಮ್ನಿ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.

ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಅಂಕಿತ್ ಚರಂಡಿಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಅಂಕಿತ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.ಈ ಸಂಬಂಧ ಆತನ ಸ್ನೇಹಿತ ಜೋಷವಾ ನೀಡಿದ ದೂರಿನಂತೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.