ಉಡುಪಿ: ಮೀನುಗಾರಿಕಾ ದೋಣಿ ದುರಂತ - ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಎಂಟು ಜನರಿದ್ದ ದೋಣಿ ಮುಳುಗಡೆ - ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ಉಪ್ಪುಂದ ಸಮೀಪ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟಿದ್ದರೆ ಮತ್ತೋರ್ವ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಮೃತಪಟ್ಟ ಯುವಕನನ್ನು ನಾಗೇಶ್ (29) ಎಂದು ಗುರುತಿಸಲಾಗಿದೆ.

ಸಚಿನ್ ಎಂಬವರ ಮಾಲಕತ್ವದ ಮಾಸ್ತಿ ಮರ್ಲ ಚಿಕ್ಕು ಹೆಸರಿನ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ದೋಣಿಯಲ್ಲಿ ಒಟ್ಟು 8 ಮಂದಿ ಇದ್ದರು. ಉಳಿದವರಲ್ಲಿ ಕೆಲವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶ್ರೀಕಾಂತ್ ಹೆಗಡೆ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಬೈಂದೂರ್ ಪೊಲೀಸ್, ಅಗ್ನಿಶಾಮಕ ದಳ, ಪೋಸ್ಟಲ್ ಗಾರ್ಡ್ , ಮೀನುಗಾರಿಕಾ ಸಹಾಯಕ ನಿರ್ದೇಶಕರು ಕುಂದಾಪುರ ಸುಮಲತಾ, ಮುಳುಗುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ, ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಖಾರ್ವಿ ಉಪ್ಪುಂದ ಮೊದಲಾದವರು ಆಗಮಿಸಿದ್ದರು. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.