ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್‌ಐಆರ್.!

ಹೋಟೆಲ್‌ವೊಂದರಲ್ಲಿ ಗಲಾಟೆ : ಹಲ್ಲೆ ಆರೋಪ

ಹೋಟೆಲ್‌ವೊಂದರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ 8ನೇ ಎಸಿಎಂಎಂ ಕೋರ್ಟ್ ಆದೇಶದ ಮೇಲೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಳೆದ ಎರಡು ತಿಂಗಳ ಹಿಂದೆ ರಿಚ್ಮಂಡ್‌ ರಸ್ತೆ ಬಳಿಯ ಹೋಟೆಲ್‌ವೊಂದರಲ್ಲಿ ಗಲಾಟೆ ನಡೆದಿತ್ತು. ರಿಕ್ಕಿ ರೈ ಹಾಗೂ ಸಹಚರರಿಂದ ಅವಾಚ್ಯ ಶಬ್ಧದಿಂದ ನಿಂದಿಸಿ ಶ್ರೀನಿವಾಸ್ ನಾಯ್ಡು ಎಂಬಾತನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.

ಹೀಗಾಗಿ ರಿಕ್ಕಿ ರೈ ಆಪ್ತ ವಕೀಲ ನಾರಾಯಣ ಸ್ವಾಮಿ, ಪೊಲೀಸ್ ಠಾಣೆಗೆ ಹೋದರೆ ಕೊಲೆ ಮಾಡುವುದಾಗಿ ಶ್ರೀನಿವಾಸ್ ನಾಯ್ಡುಗೆ ಬೆದರಿಕೆ ಹಾಕಿದ್ದರು ಎಂಬ ಆರೋಪ ಹೊರಿಸಲಾಗಿತ್ತು. ಆದರೆ ಘಟನೆಯ ಬಳಿಕ ಶ್ರೀನಿವಾಸ್ ನಾಯ್ಡು ವಿರುದ್ಧವೇ ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್‌ ಪ್ರಕರಣ ದಾಖಲಿಸಿದ್ದರು.

ಶ್ರೀನಿವಾಸ್ ನಾಯ್ಡು ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ರಿಕ್ಕಿ ರೈ ಮೇಲೆ ಹಲ್ಲೆ ಮಾಡಿದ್ದಾಗಿ ಶ್ರೀನಿವಾಸ್ ನಾಯ್ಡು ವಿರುದ್ಧ ದೂರು ಕೊಡಲಾಗಿತ್ತು. ಇದೀಗ ಕೋರ್ಟ್ ಪಿಸಿಆರ್ ಅನ್ವಯ ಎಫ್‌ಐಆರ್ ದಾಖಲಾಗಿದೆ.