ಕಾರ್ಕಳ: ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟವಾಗುತ್ತಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರನ್ನು ಹೆಡೆಮುರಿ ಕಟ್ಟಲು ಮುಂದಾಗಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಕಾರ್ಕಳ ನಗರ ಠಾಣಾ ಪೊಲೀಸರು ಮಿಯ್ಯಾರು ಗ್ರಾಮದ ಕಾರೋಲ್ಗುಡ್ಡೆ ಪರಿಸರದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಕಲೋಲ್ ಗುಡ್ಡೆಯ ನರೇಂದ್ರ(40), ಪುಲ್ಕೇರಿ ಮಸೀದಿ ಬಳಿಯ ಸಿರಾಜ್(21), ತೆಳ್ಳಾರು ಮೇಲಿನಪಲ್ಕೆಯ ಅಬ್ದುಲ್ ಆರೀಫ್(26), ಬೈಲೂರು ಬಾಣಾಲು ಜೀವನ್ (25) ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.
ಜು. 31ರ ಮಧ್ಯಾಹ್ನ 3:00 ಗಂಟೆಗೆ ಆರೋಪಿಗಳು ಮಿಯ್ಯಾರು ಗ್ರಾಮದ ಕಾರೋಲ್ಗುಡ್ಡೆ 5 ಸೆಂಟ್ಸ್ನಲ್ಲಿರುವ ಕಲ್ಲು ಕೆತ್ತುವ ಸ್ಥಳದ ಬಳಿ ಹಣ ಪಡೆದು ಅಮಲು ಪದಾರ್ಥವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಘಟನಾ ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು 1 ನೇ ಆರೋಪಿಯ ವಶದಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ 182 ಗ್ರಾಂ ಮಾದಕ ವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳು, ಗಾಂಜಾ ಮಾರಾಟ ಮಾಡಿದ ನಗದು ಹಣ ರೂ 1,500, ಕೆಎ 20 ಇಬಿ 6071 ನೇ ನಂಬ್ರದ ಮೋಟಾರ್ ಸೈಕಲ್, 2 ರಿಂದ 4 ನೇ ಅಪಾದಿತರ ವಶದಿಂದ ಪ್ಲಾಸ್ಟಿಕ್ ಚೀಲ ಸಹಿತ ತಲಾ 12 ಗ್ರಾಮ್ ಮಾದಕ ವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳನ್ನು, ತಲಾ ರೂ. 100ನ್ನು ಸ್ವಾಧೀನಪಡಿಸಿ ಅಪಾದಿತರನ್ನು ದಸ್ತಗಿರಿ ಮಾಡಿದ್ದು ಸ್ವಾಧೀನಪಡಿಸಿದ ಗಾಂಜಾದ ಮೌಲ್ಯ ರೂ 10,500 ನಗದು ರೂ 1,800 ಹಾಗೂ ರೂ 50,000ಮೌಲ್ಯದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.