ಸುಳ್ಯ: ಆಟೋ ಗ್ಯಾಂಗ್ - ಹಲ್ಲೆ ನಡೆಸಿ 3.5 ಲಕ್ಷ ಲೂಟಿ..!

ಬಾಡಿಗೆ ರಿಕ್ಷಾ ಏರಿದ ದರ್ಶನ್ ಗೆ ಕಾದಿತ್ತು ಶಾಕ್.!

ಸುಳ್ಯ: ಬಾಡಿಗೆ ಆಟೋದಲ್ಲಿ ಬಂದು ಪ್ರಯಾಣಿಕನಿಗೆ ಹಲ್ಲೆ ನಡೆಸಿ ನಗದು, ಮೊಬೈಲ್ ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡದ ಸುಳ್ಯದ ಹಳೆಗೇಟು ಬಳಿ‌ ಬುಧವಾರ ತಡರಾತ್ರಿ ನಡೆದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ ದರ್ಶನ್‌ ‌ದರೋಡೆಗೆ ಒಳಗಾದವರಾಗಿದ್ದಾರೆ. 

ದರ್ಶನ್ ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದು, ರಾತ್ರಿ 11.15ರ ಸುಮಾರಿಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳುವ ಉದ್ದೇಶದಿಂದ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ರಸ್ತೆ ಬದಿ ಬಾಡಿಗೆ ವಾಹನಕ್ಕೆ ಕಾಯುತ್ತಿದ್ದರು. ಈ ವೇಳೆ ಆಟೋರಿಕ್ಷಾ ವೊಂದು ಆಗಮಿಸಿದ್ದು, ಅದರಲ್ಲಿ ಆಗಲೇ ಇಬ್ಬರು ಪ್ರಯಾಣಿಕರು ಹಿಂಬದಿ ಸೀಟಿನಲ್ಲಿ ಕೂತಿದ್ದರು. ದರ್ಶನ್‌ ಅವರು ಆ ಅಟೋ ರಿಕ್ಷಾ ಹತ್ತಿದ್ದು, ಆಗ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ಅವರ ಕೈಯಲ್ಲಿದ್ದ ಬ್ಯಾಗ್‌‌ ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.

ಇದನ್ನು ವಿರೋಧಿಸಿದಾಗ, ದುಷ್ಕರ್ಮಿಗಳು ದರ್ಶನ್‌ಗೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ಅವರನ್ನು ಮೂವರು ಸೇರಿ ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ. ಬ್ಯಾಗಿನಲ್ಲಿ ವ್ಯವಹಾರದ ಹಣ ಒಟ್ಟು 3.5 ಲಕ್ಷ ರೂಪಾಯಿ, ಎರಡು ಮೊಬೈಲ್ ಗಳು, ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿದ್ದವು. ಘಟನೆಯ ಸಮಯ ಅಟೋ ರಿಕ್ಷಾದ ನೋಂದಣಿ ಸಂಖ್ಯೆಯನ್ನು ಗಮನಿಸಲು ದರ್ಶನ್‌ ಗೆ ಸಾಧ್ಯವಾಗಿಲ್ಲ  ಘಟನೆ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.