ಎಣ್ಣೆ ಚಾಲೆಂಜ್: ಮದ್ಯ ಸೇವಿಸಿ ರಕ್ತಕಾರಿ ಸತ್ತ ವ್ಯಕ್ತಿ.!

ಅರ್ಧ ಗಂಟೆ-90 ಎಂಲ್‌-10 ಪ್ಯಾಕೇಟ್-ಯಮಲೋಕಕ್ಕೆ ಟಿಕೇಟ್.!

ಕುಡಿತದ ಬಾಜಿ ಕಟ್ಟಿ, ವ್ಯಕ್ತಿಯೋರ್ವ ಪ್ರಾಣ ಕಳೆದುಕೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೇವರಾಜ್ ಮತ್ತು ತಿಮ್ಮೇಗೌಡ ಇಬ್ಬರು ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದರು. ಅದರಂತೆ ನಡೆದ ಚಾಲೆಂಜ್‌ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ (60) ಇದೀಗ ಸಾವನ್ನಪ್ಪಿದ್ದಾನೆ. 

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಚಾಲೆಂಜ್ ಏರ್ಪಟ್ಟಿದ್ದು, 30 ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಎದುರಾಗಿತ್ತು. ಇಬ್ಬರಿಗೂ ಕೃಷ್ಣೇಗೌಡ ಎಂಬಾತ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದ. ಚಾಲೆಂಜ್‌ ಗೆಲ್ಲಲು ಮದ್ಯ ಕುಡಿದು, ರಕ್ತ ವಾಂತಿ ಮಾಡಿಕೊಂಡು ತಿಮ್ಮೇಗೌಡ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ. ತಿಮ್ಮೇಗೌಡ ಅಸ್ವಸ್ಥ ಆಗುತ್ತಲೆ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. 

ಈ ಮಧ್ಯೆ ಕುಡಿದು ಸುಸ್ತಾಗಿ ಬಿದ್ದಿದ್ದ ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆತಂದು ಬಿಟ್ಟಿದ್ದರು. ಇನ್ನು ಹಬ್ಬಕ್ಕಾಗಿ ತಿಮ್ಮೇಗೌಡನ ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಿಮ್ಮೇಗೌಡ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ತಿಮ್ಮೇಗೌಡರ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.