ಮಂಗಳೂರು: ಮರ್ಡರ್‌ಗೆ ಪ್ಲ್ಯಾನ್ ಮಾಡಿದ್ದ ಕುಖ್ಯಾತ ರೌಡಿಗಳ ಬಂಧನ

ಮಂಗಳೂರು: ಮರ್ಡರ್‌ಗೆ ಪ್ಲ್ಯಾನ್ ಮಾಡಿದ್ದ ಕುಖ್ಯಾತ ರೌಡಿಗಳ ಬಂಧನ

ಮಂಗಳೂರು: ಕೊಲೆಗೆ ಸಂಚು ರೂಪಿಸಿದ ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಡ್ಯಾರ್ ಪರಿಸರದಲ್ಲಿ ಅಕ್ರಮ ಜಾನುವಾರು ಸಾಗಾಟದ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಹಿಂದೆ ಕೊಲೆ, ಕೊಲೆಯತ್ನ, ಜಾನುವಾರು ಕಳ್ಳತನ ಹಾಗೂ ಇತರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ತಂಡವೊ0ದು ಅಡ್ಯಾರ್ ಪರಿಸರದಲ್ಲಿ ಮಾರಾಕಾಯುಧಗಳೊಂದಿಗೆ ಮತ್ತೊಂದು ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. 

ಫರಂಗಿಪೇಟೆ ಅಮ್ಮೆಮ್ಮಾ ನಿವಾಸಿಗಳಾದ ತಸ್ಲಿಮ್ @ ಗರುಡ ತಸ್ಲೀಮ್ (34), ಹೈದರಾಲಿ @ ಹೈದು(26) ಎಂಬವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ತಲವಾರು-2, ಚೂರಿ-1, ಮೊಬೈಲ್ ಫೋನುಗಳು-2, ಹಾಗೂ ಏಐ -14-ಂಃ-7212 ಮಹೇಂದ್ರ ಪಿಕ್ ಅಪ್ ವಾಹನ ವಶಪಡಿಸಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 5,21,000/- ಆಗಬಹುದು. ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹತ್ತು ದಿನಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆ

ಫರಂಗಿಪೇಟೆ ಪರಿಸರದಲ್ಲಿ ಅಕ್ರಮ ಜಾನುವಾರು ಸಾಗಾಟದ ಎರಡು ತಂಡಗಳ ನಡುವೆ ಜಾನುವಾರು ಸಾಗಾಟದ ವಿಷಯದಲ್ಲಿ ಗಲಾಟೆ ನಡೆದಿತ್ತು. ಅಕ್ರಮ ಜಾನುವಾರು ಸಾಗಾಟ ವಿಚಾರವಾಗಿದ್ದರಿಂದ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಆನಂತರ, ತಸ್ಲಿಂ ಹಾಗೂ ಆತನ ಸಹಚರರು ಇನ್ನೊಂದು ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿ ಹೊಂಚು ಹಾಕುತ್ತಿದ್ದ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.

ಆರೋಪಿಗಳ ಪೈಕಿ ತಸ್ಲಿಮ್ @ ಗರುಡ ತಸ್ಲಿಮ್ ಎಂಬಾತ ಈ ಹಿಂದೆ ಕೊಲೆ ಯತ್ನ, ದರೋಡೆ ಪ್ರಕರಣ, ಜೋಡಿ ಕೊಲೆ ಪ್ರಕರಣ, ಜಾನುವಾರು ಕಳ್ಳತನ ಪ್ರಕರಣ ಹೀಗೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದ 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದ. 

ಇನ್ನೋರ್ವ ಆರೋಪಿ ಹೈದರಾಲಿ @ಹೈದು ಎಂಬಾತ ಈ ಹಿಂದೆ ಮೂಡಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಜಾನುವಾರು ಕಳ್ಳತನ ಪ್ರಕರಣ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.