ಎಸ್‌ಎಡಿ ನಾಯಕ ಸುರ್ಜಿತ್ ಸಿಂಗ್ ಹತ್ಯೆ.!

ಶಿರೋಮಣಿ ಅಕಾಲಿ ದಳ ನಾಯಕನಿಗೆ ಗುಂಡಿಕ್ಕಿದ ದುಷ್ಕರ್ಮಿಗಳು

ಶಿರೋಮಣಿ ಅಕಾಲಿದಳ (ಎಸ್‌ಎಡಿ)ಯ ಮುಖಂಡ ಸುರ್ಜಿತ್ ಸಿಂಗ್ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಸುರ್ಜಿತ್ ಸಿಂಗ್ ಅವರು ಕಿರಾಣಿ ಅಂಗಡಿಯೊಂದರ ಹೊರಗೆ ಕುಳಿತಿದ್ದಾಗ ಈ ಕೃತ್ಯ ನಡೆದಿದೆ ಎಂದು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ) ತಲ್ವಿಂದರ್ ಸಿಂಗ್ ತಿಳಿಸಿದ್ದಾರೆ.

"ರಾತ್ರಿ 7 ಗಂಟೆಯ ಸುಮಾರಿಗೆ ಸುರ್ಜಿತ್ ಸಿಂಗ್ ಅವರು ಸ್ಥಳೀಯ ದಿನಸಿ ಅಂಗಡಿಯೊಂದರ ಹೊರಗೆ ಕುಳಿತಿದ್ದರು. ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಬಂದು ಸುರ್ಜಿತ್ ಸಿಂಗ್ ಕಡೆಗೆ ನಾಲ್ಕು ಸುತ್ತು ಗುಂಡು ಹಾರಿಸಿದರು. ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.” ಎಂದು ಸಿಂಗ್ ಹೇಳಿದ್ದಾರೆ.

ಎಸ್‌ಎಡಿ ನಾಯಕ ಸುರ್ಜಿತ್ ಸಿಂಗ್ ಅವರು ಮೆಗೋವಾಲ್ ಗಂಜಿಯಾನ್ ಗ್ರಾಮದ ಮಾಜಿ ಸರಪಂಚ್ ಆಗಿದ್ದು, ಪ್ರಸ್ತುತ ಅವರ ಪತ್ನಿ ಅದೇ ಹುದ್ದೆಯಲ್ಲಿದ್ದಾರೆ. ಹತ್ಯೆಯ ಹಿಂದಿನ ಕಾರಣ ತಿಳಿದುಬಂದಿಲ್ಲ ಮತ್ತು ಅಪರಿಚಿತ ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.