ಬೈಂದೂರು: ವಿದ್ಯುತ್ ಶಾಕ್ ಗೆ ಬಲಿಯಾದ ದಂಪತಿ.!

ವಿದ್ಯುತ್​ ಶಾಕ್​​ನಿಂದ ಗಂಡನ ರಕ್ಷಿಸಲು ಹೋಗಿ ಪತ್ನಿಯೂ ಸಾವು; ಮೆಸ್ಕಾಂ ನಿರ್ಲಕ್ಷ್ಯಕ್ಕೆ ದಂಪತಿ ಬಲಿ!

ಕುಂದಾಪುರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ದಂಪತಿ ಸಾವನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಮನೆ ತೋಟದ ಜಮೀನಿನಲ್ಲಿ ನಡೆದಿದೆ. 

ಮೃತರನ್ನು ಮಹಾಬಲ ದೇವಾಡಿಗ (58), ಲಕ್ಷ್ಮಿ ಮಹಾಬಲ ದೇವಾಡಿಗ (48) ಎಂದು ಗುರುತಿಸಲಾಗಿದೆ.

ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದು, ಇಂದು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ‌ ಕಳೆದರೂ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪತ್ನಿ‌ ಲಕ್ಷ್ಮೀ ಅನುಮಾನಗೊಂಡು ಕರಣಿಕರ ಮನೆಗೆ ತೆರಳಿದ್ದರು. ಈ ವೇಳೆ ಕರಣಿಕರ ಮನೆಗೆ ಬರುವ ಕಾಲುದಾರಿಯಲ್ಲಿ ತುಂಡರಿಸಿದ ವಿದ್ಯುತ್ ತಂತಿ ತಗುಲಿ ಪತಿ ಬಿದ್ದಿರುವುದು ಲಕ್ಷ್ಮೀ ಗಮನಕ್ಕೆ ಬಂದಿದೆ. ತಕ್ಷಣವೇ ಪತಿಯನ್ನು ರಕ್ಷಿಸಲು ಸ್ಥಳೀಯರಲ್ಲಿ ನೆರವಿಗೆ ಬರುವಂತೆ ಕೂಗತೊಡಗಿದಾಗ ಸಮೀಪದ‌ ಮನೆಯರು ಬರುವಷ್ಟರಲ್ಲಾಗಲೇ ಮಳೆ ನೀರಿನಿಂದ ಒದ್ದೆಯಾದ ಮರದ ತುಂಡಲ್ಲಿ ರಕ್ಷಣೆಗೆ ಧಾವಿಸಿದ ಪರಿಣಾಮ ಲಕ್ಷ್ಮೀಯವರಿಗೂ ವಿದ್ಯುತ್ ಪ್ರವಹಿಸಿ ಅವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ ನೀಡಿದ್ದಾರೆ. ವಿದ್ಯುತ್ ತಂತಿ ಹಳೆಯದಾದರೂ ಬದಲಿಸದೇ ಇರುವ ಮಸ್ಕಾಂ ಅವರ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.