ಕುಂದಾಪುರ: ಚಿನ್ನದ ಸರ ಎಗರಿಸಿದ ಕಳ್ಳರು ಅರೆಸ್ಟ್.!

ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ : ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು 75 ವರ್ಷ ಪ್ರಾಯದ ಬಾಬಿ ದಾಸ್ ಎಂಬವರ ಬಳಿ ನೀರು ಕೇಳುವ ನೆಪದಲ್ಲಿ ಮಾತನಾಡಿಸಿ 8 ಗ್ರಾಂ ತೂಕದ ಚಿನ್ನದ ಸರ ಎಳೆದೊಯ್ದ ಘಟನೆ ಮಾ.5ರಂದು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಗುಡ್ರಿ ಎಂಬಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕಲ್ಬುರ್ಗಿ ಹಾಗರಗಿ ಮೂಲದ ಪ್ರಸ್ತುತ ಬೆಂಗಳೂರು ಯಲಹಂಕ ನಿವಾಸಿ ವಿಜಯ ಕುಮಾರ್ (23), ಕುಂದಾಪುರ ನೇರಳಕಟ್ಟೆ ಹಿಲ್ಕೋಡು ಮೂಲದ ಪ್ರಸ್ತುತ ಯಲಹಂಕ ನಿವಾಸಿ ಮನೋಜ್ (27) ಬಂಧಿತ ಆರೋಪಿಗಳು.

ಮಾ.11ರಂದು ಬೆಳಗ್ಗೆ ನೇರಳಕಟ್ಟೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಸುಲಿಗೆ ಮಾಡಿದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 1,50,000 ರೂ. ಎಂದು ಅಂದಾಜಿಸಲಾಗಿದೆ. 

ನೇರಳಕಟ್ಟೆ ಗುಡ್ರಿ ಎಂಬಲ್ಲಿ ರಾಜ್ಯ ಹೆದ್ದಾರಿ-27 ಅಂಚಿನಲ್ಲಿ ಗೂಡಂಗಡಿಯಿಟ್ಟುಕೊಂಡಿದ್ದ ಬಾಬಿ ದಾಸ್ ಒಂಟಿಯಾಗಿದ್ದ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ನೀರು ಕೇಳಿ ಅಂಗಡಿಗೆ ಬಂದು ಬಾಬಿಯವರ ಕುತ್ತಿಗೆಯಲ್ಲಿದ್ದ 8ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.