ಕಾಸರಗೋಡು: ಹಣದ ವಿಚಾರಕ್ಕೆ ಜಗಳ; ಇಬ್ಬರ ಮೇಲೆ ಹಲ್ಲೆ

ಅಂಗಡಿಗೆ ನುಗ್ಗಿ ಹತ್ಯೆಗೆ ಯತ್ನ
ಕೋಳಿ ತುಂಡರಿಸುವ ಕತ್ತಿಯಿಂದ ಹಲ್ಲೆಗೈದ ವ್ಯಕ್ತಿ

ಕಾಸರಗೋಡು: ಹಣದ ವ್ಯವಹಾರಕ್ಕೆ ಸಂಬಂಧಿಸಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆ ಹಂತಕ್ಕೆ ತಲುಪಿದ ಘಟನೆ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಂಬಳೆ ಮಾರ್ಕೆಟ್ ರೋಡ್‌ನಲ್ಲಿ ಕೋಳಿ ಅಂಗಡಿ ನಡೆಸುವ ಮಾಟೆಂಗುಳಿ ನಿವಾಸಿ ಅನ್ವರ್ ಕೆ.ಎ(44), ಕಂಚಿಕಟ್ಟೆ ನಿವಾಸಿ ಇಬ್ರಾಹಿಂ ಕೆ.ಎ(43) ಎಂಬವರು ಹೊಡೆದಾಡಿಕೊಂಡಿದ್ದಾರೆ. ಇನ್ನು ಜಗಳವನ್ನು ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದು, ಗಾಯಗೊಂಡ ಇಬ್ಬರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿಪಳ್ಳದ ಹಾರಿಫ್ ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಅಂಗಡಿಗೆ ನುಗ್ಗಿ ಹಲ್ಲೆ, ಹತ್ಯೆಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಈತ ಇದೀಗ ತಲೆಮರೆಸಿಕೊಂಡಿದ್ದು, ಈತನಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಮಾ.14ರ ಸಂಜೆ 6 ಗಂಟೆ ವೇಳೆ ಅನ್ವರ್‌ರ ಕೋಳಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಶಾಂತಿಪಳ್ಳದ ಹಾರಿಫ್‌ನಿಂದ ಅನ್ವರ್‌ಗೆ ಹಣ ಸಿಗಲು ಬಾಕಿಯಿದೆಯೆಂದು ಹೇಳಲಾಗುತ್ತಿದೆ. ಸಂಜೆ ಅಂಗಡಿ ಮುಂದೆ ನಡೆದು ಹೋಗುತ್ತಿದ್ದ ಹಾರಿಫ್‌ನಲ್ಲಿ ಅನ್ವರ್ ಹಣ ಕೇಳಿದ್ದು, ಇದರಿಂದ ಅವರೊಳಗೆ ವಾಗ್ವಾದ ನಡೆದಿದೆ. ವಾಗ್ವಾದ ತೀವ್ರಗೊಂಡು ಅನ್ವರ್ ಹಾಗೂ ಹಾರಿಫ್ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಅಂಗಡಿಯಲ್ಲಿದ್ದ ಕೋಳಿ ತುಂಡರಿಸುವ ಕತ್ತಿಯನ್ನು ತೆಗೆದು ಹಾರಿಫ್ ಯದ್ವಾತದ್ವಾ ಕಡಿದಿದ್ದಾನೆನ್ನಲಾಗಿದೆ. ಘಟನೆ ವೇಳೆ ಇಬ್ರಾಹಿಂ ಅಂಗಡಿಗೆ ತಲುಪಿದ್ದರು. ಅನ್ವರ್‌ನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ತಡೆಯಲು ಇಬ್ರಾಹಿಂ ಯತ್ನಿಸಿದ್ದು, ಈ ವೇಳೆ ಅವರಿಗೂ ಇರಿತದಿಂದ ಗಾಯಗಳಾಗಿವೆ. ಅನ್ವರ್‌ರ ತಲೆ, ಕೈ, ಕಾಲಿಗೆ ಹಾಗೂ ಇಬ್ರಾಹಿಂರ ಕಾಲಿಗೆ ಇರಿತದಿಂದ ಗಂಭೀರ ಗಾಯಗಳಾಗಿವೆ.