ಸಿಲಿಕಾನ್ ಸಿಟಿಯಲ್ಲಿ ಗುಂಡಿನ ದಾಳಿ..! ಜ್ಯುವೆಲ್ಲರ್ಸ್ ಮಾಲೀಕನ ಕೊಲೆಗೆ ಯತ್ನ

ಕಫೆ ಬಾಂಬ್ ಬ್ಲಾಸ್ಟ್ ಘಟನೆ ಮಾಸುವ ಮುನ್ನವೇ ಗುಂಡಿನ ದಾಳಿ..! ಬೆಚ್ಚಿಬಿದ್ದ ಜನತೆ

ಸಿಲಿಕಾನ್ ಸಿಟಿಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಮಾಸುವ ಮುನ್ನವೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ. ನಗರದ ಕೊಡಿಗೇಹಳ್ಳಿಯ ಜ್ಯುವೆಲ್ಲರಿ ಶಾಪ್ ನಲ್ಲಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ದೇವಿನಗರದಲ್ಲಿರುವ ಲಕ್ಷ್ಮಿ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಚಿನ್ನಾಭರಣ ಮಳಿಗೆಯ ಮಾಲೀಕ ಹಣ ನೀಡುವುದಕ್ಕೆ ವಿರೋಧಿಸಿದ್ದು ದುಷ್ಕರ್ಮಿಗಳು ಹಾಗೂ ಮಾಲೀಕನ ನಡುವೆ ಮಾತಿನ ಚಕಮಕಿಯಾಗಿದೆ. ಆಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಅಪ್ಪುರಾಮ್, ಅಭಿರಾಮ್ ಎಂಬುವವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗುAಡಿನ ದಾಳಿಯಲ್ಲಿ ಗಾಯಗೊಂಡಿರುವ ಅಪ್ಪುರಂ ಮತ್ತು ಆನಂದರಾಮ್ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ಮೂರು ಸುತ್ತು ಗುಂಡು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ಮತ್ತೊಂದೆಡೆ ದುಷ್ಕರ್ಮಿಗಳು ದರೋಡೆ ಅಲ್ಲದೆ ಸುಪಾರಿ ಪಡೆದು ಜ್ಯುವೆಲ್ಲರಿ ಅಂಗಡಿ ಮಾಲೀಕನನ್ನು ಕೊಲೆ ಮಾಡಲು ಬಂದಿದ್ದರು ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಆರೋಪಿಗಳು ಏನು ದೋಚಲು ಆಗಿಲ್ಲ. ಕೇವಲ ಗುಂಡು ಹಾರಿಸಿದ್ದಾರೆ. ಓರ್ವನಿಗೆ ಕಾಲಿಗೆ, ಮತ್ತೋರ್ವನಿಗೆ ಹೊಟ್ಟೆಗೆ ಗುಂಡು ತಾಕಿದೆ. ಆರೋಪಿಗಳು ಚಿನ್ನದಂಗಡಿಯೊಳಗೆ ಕೇವಲ ಒಂದು ನಿಮಿಷಗಳ ಕಾಲ ಇದ್ದರು. ಸದ್ಯಕ್ಕೆ ಆಭರಣ ಮಳಿಗೆಯಲ್ಲಿ ಕಳ್ಳತನ ನಡೆದಿರುವುದು ಪತ್ತೆಯಾಗಿಲ್ಲ. ಆರೋಪಿಗಳು ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆರೋಪಿಗಳು ಪಿಸ್ತೂಲ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ ಮತ್ತು ನಗರ ಪೊಲೀಸ್ ಆಯುಕ್ತ ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ. ಸ್ಥಳದಲ್ಲಿ ಒಂದು ಮಚ್ಚು ಸಹ ಪತ್ತೆಯಾಗಿದೆ.