ಬಂಟ್ವಾಳ: ಸ್ನೇಹಿತರ ಜೊತೆ ಈಜಲು ಬಂದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು.!

ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು

ಬಂಟ್ವಾಳ : ಸ್ನೇಹಿತರ ಜೊತೆಯಲ್ಲಿ ಈಜಲು ಬಂದ ಐವರ ಪೈಕಿ ವ್ಯಕ್ತಿಯೋರ್ವನು ನೇತ್ರಾವತಿ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಶಂಭೂರು ಗ್ರಾಮದ ದೇವಸ್ಥಾನವೊಂದರ ಸಮೀಪ ನದಿಯಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ.

ಬೆಳ್ತಂಗಡಿ ನಿವಾಸಿ ಲೋಹಿತಾಕ್ಷ ಮೃತಪಟ್ಟ ವ್ಯಕ್ತಿ. ಬೆಳ್ತಂಗಡಿ ನಿವಾಸಿಗಳಾದ ವಿನ್ಸಿ,ಮ್ಯಾಕ್ಸಿ,ಪ್ರಮೋದ್, ದಯಾನಂದ ಎಂಬವರ ಜೊತೆಗೆ ನೇತ್ರಾವತಿ ನದಿಗೆ ಈಜಾಡಲು ಬಂದಿದ್ಧ ವೇಳೆ ಘಟನೆ ನಡೆದಿದೆ. ವಿನ್ಸಿ ಎಂಬವರ ಪತ್ನಿಯ ಮನೆ ಶಂಭೂರಿನಲ್ಲಿದ್ದು, ಇಲ್ಲಿಗೆ ಆಗ್ಗಾಗ್ಗೆ ಬಂದು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಿದ್ದರು ಎಂದು ಹೇಳಲಾಗಿದೆ.

ಇಂದು ಕೂಡ ಅದೇ ರೀತಿ ಸ್ನೇಹಿತರು ಬೆಳ್ತಂಗಡಿಯಿಂದ ಕಾರಿನಲ್ಲಿ ಬಂದಿದ್ದು, ನದಿಗೆ ಸ್ನಾನ ಮಾಡಲು ಬಂದಿದ್ದರು. ಸಂಜೆ ಸುಮಾರು 4 ಗಂಟೆ ವೇಳೆಗೆ ನದಿಯಿಂದ ಲೋಹಿತಾಕ್ಷ ಅವರು ಕಾರಿನ ಬಳಿಗೆ ಹೋಗುವುದಾಗಿ ಬಂದಿದ್ದರು. ಆದರೆ ಸ್ನೇಹಿತರು ಸ್ನಾನ‌ ಮುಗಿಸಿ ಕಾರಿನತ್ತ ಬಂದಾಗ ಈತ ಕಾರಿನ ಬಳಿ ಇಲ್ಲದಿರುವುದನ್ನು ಕಂಡು ಗಾಬರಿಯಾಗಿ ಮತ್ತೆ ನದಿಯತ್ತ ತೆರಳಿದಾಗ ನದಿಯ ಬದಿ ನೀರಿನಲ್ಲಿ ಬಿದ್ದಿದ್ದರು. ಬಿದ್ದ ವೇಳೆ ತಲೆಯ ಭಾಗಕ್ಕೆ ಗಾಯವಾಗಿದ್ದು, ಈತನನ್ನು ಮೇಲೆ ತರಲಾಗಿದೆಯಾದರೂ ಆ ವೇಳೆ ಆತ ಮೃತಪಟ್ಟ ಬಗ್ಗೆ ಸ್ನೇಹಿತರು ತಿಳಿಸಿದ್ದಾರೆ.

ಬಗ್ಗೆ ಅಲ್ಲೇ ಸಮೀಪದಲ್ಲಿ ವಾಲಿಬಾಲ್ ಅಟ ಆಡುತ್ತಿದ್ದ ಸ್ಥಳೀಯರು ಗಮನಿಸಿ ವಿಚಾರಿಸಿದಾಗ ಬೆಳಕಿಗೆ ಬಂದಿದೆ.ಬೆಳ್ತಂಗಡಿಯಿಂದ ಬಂಟ್ವಾಳಕ್ಕೆ ಸ್ನಾನ ಮಾಡಲು ಬಂದಿರುವ ಯುವಕರ ಬಗ್ಗೆ ಸಾಕಷ್ಟು ಸಂಶಯಗಳು ಸ್ಥಳೀಯರಲ್ಲಿ ಮೂಡಿತ್ತು.ಆದರೆ ಅಂತಹ ಯಾವುದೇ ಸಂದೇಹಗಳಿಲ್ಲ, ಸ್ನೇಹಿತರು ಜೊತೆಯಾಗಿ ಇಲ್ಲಿಗೆ ಈಜಲು ಬರುತ್ತಿದ್ದ ಬಗ್ಗೆ ಪೋಲೀಸರಿಗೆ ಮಾಹಿತಿ ದೊರೆತಿದ್ದು, ಈತ ಬಿದ್ದು ತಲೆಗೆ ಗಾಯವಾಗಿದ್ದ ಕಾರಣ ಮೃತಪಟ್ಟಿರಬಹುದು ಎಂದು ಪೋಲೀಸರು ತಿಳಿಸಿದ್ದಾರೆ.ಸ್ನೇಹಿತರನ್ನು ತನಿಖೆ ನಡೆಸಿ ಸ್ಪಷ್ಟವಾದ ಮಾಹಿತಿ ಯನ್ನು ಪಡೆಯಲಾಗುತ್ತದೆ ಎಂದು ಎಸ್.ಐ.ಹರೀಶ್ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಹಾಗೂ ಗ್ರಾಮಸ್ಥರು ಜಮಾಯಿಸಿದ್ದಾರೆ.