ಉಡುಪಿ ಉದ್ಯಮಿಯ ಫ್ಯಾಕ್ಟರಿ ಕೋವಿಡ್‌ನಿಂದ ನಷ್ಟ; ಆತ್ಮಹತ್ಯೆಗೆ ಶರಣಾದ ಕುಟುಂಬ!

ಈಗ ಸಾಲ ತೀರಿಸಲಾಗದೇ ಮನನೊಂದು ತಾಯಿ ಮಕ್ಕಳು ಆತ್ಮಹತ್ಯೆ

ಉಡುಪಿಯಿಂದ ಕಳೆದ 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಕುಟುಂಬ ಕಳೆದ ಐದು ವರ್ಷಗಳ ಹಿಂದೆ ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿತ್ತು. ಆದರೆ, ಫ್ಯಾಕ್ಟರಿ ಚೇತರಿಕೆ ಕಾಣುವ ಅವಧಿಯಲ್ಲೇ ಬರಸಿಡಿಲಿನಂತೆ ಬಂದ ಕೋವಿಡ್ ಅವಧಿಯಲ್ಲಿ ನಷ್ಟವಾಗಿ, ಲಕ್ಷಾಂತರ ರೂ. ಸಾಲ ಬೆಳೆಯಿತು. ಈಗ ಸಾಲ ತೀರಿಸಲಾಗದೇ ಕುಟುಂಬದ ಇಬ್ಬರು ದುಡಿಯುವ ಮಕ್ಕಳು ಹಾಗೂ ತಾಯಿ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಉಡುಪಿಯಿಂದ ಬಂದು ಕಷ್ಟಪಟ್ಟು ದುಡಿದು ಕೋವಿಡ್‌ಗಿಂತ ಮುಂಚೆ ಆರಂಭಿಸಿದ್ದ ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿದ್ದರು. ಆದರೆ, ಲಕ್ಷಾಂತರ ರೂ. ಸಾಲ ಮಾಡಿ ಆರಂಭಿಸಿದ್ದ ಫ್ಯಾಕ್ಟರಿ ಕೋವಿಡ್ ವೇಳೆ ನಷ್ಟ ಅನುಭವಿಸಿತು. ಆದರೆ, ಫ್ಯಾಕ್ಟರಿ ಮುಚ್ಚಿ ಸಾಲ ತೀರಿಸಲು ಇಡೀ ಮನೆ ಮಂದಿಯೆಲ್ಲಾ ದುಡಿದರೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಬ್ಯಾಂಕ್‌ನವರು ಸಾಲ ವಸೂಲಿ ಮಾಡುವುದಕ್ಕೆ ನಿನ್ನೆ ಮನೆಯ ಬಳಿಗೆ ಬಂದಿದ್ದರು. ಆದರೆ, ಕೈಯಲ್ಲಿ ಹಣವಿಲ್ಲದೇ ಜೀವನ ಮಾಡುವುದಕ್ಕೂ ಕಷ್ಟ ಪಡುತ್ತಿದ್ದ ಕುಟುಂಬದಲ್ಲಿ ಇಬ್ಬರು ಮಕ್ಕಳನ್ನು ಒಳಗೊಂಡ0ತೆ ತಾಯಿಯೂ ಸೇರಿ ಒಟ್ಟಿಗೆ ಮೂವರು ಬಾಡಿಗೆ ಮನೆಯಲ್ಲಿಯೇ ಸಾವಿನ ಹಾದಿಯನ್ನು ಹಿಡಿದಿದ್ದಾರೆ.

ತಾಯಿ ಸುಕನ್ಯಾ (58), ಮಕ್ಕಳಾದ ನಿಶ್ಚಿತ್ ಹಾಗೂ ನಿಕಿತ್ ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಗಳಾಗಿದ್ದಾರೆ. ತಂದೆ ಜಯಾನಂದ್ ಅವರು ಮನೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ಅಂಗವಿಕಲ ಆಗಿದ್ದನು. ಆದರೆ, ಚೆನ್ನಾಗಿ ಓದಿಕೊಂಡಿದ್ದು, ಕಡಿಮೆ ಸಂಬಳಕ್ಕೆ ಮನೆಯಲ್ಲಿಯೇ ವರ್ಕ್ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದನು. ಇನ್ನೊಬ್ಬ ಮಗ ನಿಖಿತ್ ಕೂಡ ಬಿಸಿನೆಸ್ ಲಾಸ್ ಆಗಿದ್ದರಿಂದ ಮನನೊಂದಿದ್ದನು. ಅಪ್ಪನ ಲಾಸ್ ಭರ್ತಿ ಮಾಡುವುದಕ್ಕೆ ತಾನು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು ಏನಾದರೂ ಮತ್ತೊಂದು ಬಿಸಿನೆಸ್ ಮಾಡೋಣ ಎಂದು ಮನೆಯಲ್ಲಿಯೇ ಕುಳಿತಿದ್ದನು. 

ಫ್ಯಾಕ್ಟರಿ ನಷ್ಟವಾಗಿ ಮುಚ್ಚಿದ್ದರಿಂದ ಲಕ್ಷಾಂತರ ರೂ. ಸಾಲವಿತ್ತು. ಮೈತುಂಬಾ ಸಾಲ ತೀರಿಸುವುದು ಒಂದೆಡೆಯಿರಲಿ, ಜೀವನ ನಡೆಸುವುದೇ ದೊಡ್ಡ ಸವಾಲಾಗಿತ್ತು. ತಂದೆ ಬೇರೆಡೆ ಕೆಲಸ ಮಾಡುತ್ತಿದ್ದರೆ, ತಾಯಿ ತಮ್ಮ ಏರಿಯಾದಲ್ಲಿನ ಮಕ್ಕಳಿಗೆ ಟ್ಯೂಷನ್ ಮಾಡಿ ಮನೆಯನ್ನು ನಿಭಾಯಿಸಲು ಹಣ ಸಂಪಾದನೆ ಮಾಡುತ್ತಿದ್ದಳು. ಎಲ್ಲರೂ ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.