ಮಂಗಳೂರು: 25 ಲಕ್ಷ ಲಂಚ ಸ್ವೀಕಾರ - ಮುಡಾ ಕಮಿಷನರ್, ದಲ್ಲಾಳಿ ಲೋಕಾಯುಕ್ತ ಬಲೆಗೆ

ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್

ಮಂಗಳೂರು : ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್‌ ಆಲಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಉದ್ಯಮಿಯಿಂದ 25 ಲ.ರೂ. ಲಂಚ ಸ್ವೀಕರಿಸಿದ ಮುಡಾ ಆಯುಕ್ತ ಮನ್ಸೂರ್‌ ಆಲಿ. ಟಿಡಿಆರ್‌ಗೆ ಸಂಬಂಧಿಸಿದಂತೆ ಮಾ.23ರಂದು ನಗರದ ಮಂಗಳಾ ಕ್ರೀಡಾಂಗಣದ ಬಳಿ ದಲ್ಲಾಳಿಯ ಮೂಲಕ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ದಲ್ಲಾಳಿ ಮುಹಮ್ಮದ್ ಸಲೀಂಗೂ ನ್ಯಾಯಾಂಗ 14 ದಿನಗಳ ಬಂಧನ ವಿಧಿಸಲಾಗಿದೆ.

ಟಿಡಿಆರ್​ ಕ್ಲಿಯರೆನ್ಸ್ ಮಾಡಲು 25 ಲಕ್ಷ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ಡಿವೈಎಸ್​ಪಿ ಚೆಲುವರಾಜ್, ಇನ್ಸ್ಪೆಕ್ಟರ್​ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದ ಅಧಿಕಾರಿಗಳು ದಿಢೀರ್​ ದಾಳಿ ಮಾಡಿ ಆಯುಕ್ತ ಮನ್ಸೂರ್​ ಅಲಿಯನ್ನು ರೆಡ್​ ಆ್ಯಂಡ್​ ಆಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಆಯುಕ್ತ ಮನ್ಸೂರ್​ ಅಲಿ ಜೊತೆ ಬ್ರೋಕರ್ ಸಲೀಂ ಎಂಬುವವರನ್ನು ಕೂಡ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.