ಕಾರ್ಕಳ: ಮನೆಮಂದಿ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು - ಲಕ್ಷಾಂತರ ಎಗರಿಸಿ ಪರಾರಿ.!!

ಮನೆಮಂದಿ ನಿದ್ರಿಸುತ್ತಿದ್ದಾಗ ನುಗ್ಗಿದ ಕಳ್ಳರು

ಕಾರ್ಕಳ  : ಮನೆಮಂದಿ ಮಲಗಿದ್ದ ವೇಳೆ ಕಳ್ಳರು ಕಿಟಕಿಯ ಬಾಗಿಲ ಚಿಲಕ ಮುರಿದು ಮನೆಯ ಒಳನುಗ್ಗಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2.25 ಲಕ್ಷ ನಗದು ದೋಚಿದ ಘಟನೆ ಕುಕ್ಕುಂದೂರು ನಲ್ಲಿ ನಡೆದಿದೆ.

ಇಲ್ಲಿನ ಜೋಡುರಸ್ತೆ ನಿವಾಸಿ ಜಗದೀಶ್ ಬಿ.ಎ. ಅವರ ಮನೆಯಲ್ಲಿ ಕಳ್ಳತನವಾಗಿದ್ದು, ರಾತ್ರಿ ಮನೆಯ ಬಾಗಿಲು ಹಾಕಿ ಭದ್ರಪಡಿಸಿ ಮಲಗಿದ್ದರು. ಆದರೆ ಬೆಳಗ್ಗಿನ ಜಾವ 3: 40 ಗಂಟೆಗೆ ಜಗದೀಶ್ ರವರು ಮಲಗಿದ್ದ ಕೋಣೆಯು ತೆರೆದ ಶಬ್ದ ಕೇಳಿ ಎದ್ದು ನೋಡಿದಾಗ ಮನೆಯ ಮುಂದಿನ ಬಾಗಿಲು ಅರ್ಧ ತೆರೆದಿದ್ದು, ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿರುವುದು ಕಂಡುಬಂದಿದೆ. 

ಮನೆಯೊಳಗೆ ಪರಿಶೀಲಿಸಿ ನೋಡಿದಾಗ ಯಾರೋ ಕಳ್ಳರು ಮನೆಯ ಮುಖ್ಯದ್ವಾರದ ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿ ಬಾಗಿಲಿನ ಚಿಲಕವನ್ನು ಕಿಟಿಕಿಯ ಮೂಲಕ ತೆರೆದು ಮನೆಯೊಳಗೆ ಪ್ರವೇಶಿಸಿ ಮನೆಯ ಇನ್ನೊಂದು ಕೋಣೆಯೊಳಗೆ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹುಡುಕಾಡಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2,25,000 ರೂ. ನಗದು ಎಗರಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.