ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿ ಇರಿತ - ಆರೋಪಿಯ ಬಂಧನ

ಚೂರಿ ಇರಿದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿ.

ಎ.14 ರಂದು ಆದಿತ್ಯವಾರ ರಾತ್ರಿ ವೇಳೆ ಜಕ್ರಿಬೆಟ್ಟು ಎಂಬಲ್ಲಿ ಹಿಂದೂ ಯುವಸೇನೆಯ ಮುಖಂಡ ಪುಷ್ಪರಾಜ್ ಎಂಬಾತನಿಗೆ ರವಿ ಎಂಬಾತ ಚೂರಿಯಿಂದ ಇರಿದು ಪರಾರಿಯಾಗಿದ್ದ.ಚೂರಿ ಇರಿತದಿಂದ ಗಾಯಗೊಂಡಿದ್ದ ಪುಷ್ಪರಾಜನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದ ಬಳಿಕ ಆರೋಪಿ ರವಿ ಮೊಬೈಲ್ ಫೋನ್ ಸ್ವಿಚ್ ಆಪ್ ಮಾಡಿ ಪರಾರಿಯಾಗಿದ್ದ. ಇದೀಗ ಘಟನೆ ನಡೆದು ನಾಲ್ಕು ದಿನಗಳ ಬಳಿಕ ಈತನನ್ನು ಕಾವಳಕಟ್ಟೆ ಎಂಬಲ್ಲಿಂದ ಪೊಲೀಸರು ವಶಕ್ಕೆ ಪಡೆದುಕೊಂಡು ಗಲಾಟೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ. ಚೂರಿ ಇರಿದ ಘಟನೆಗೆ ಸ್ಪಷ್ಟವಾದ ಕಾರಣ ಪೋಲಿಸ್ ತನಿಖೆಯ ಬಳಿಕ ತಿಳಿಯಬೇಕಿದೆ.