ಬಂಟ್ವಾಳ: ಹೋಟೆಲ್'ಗೆ ಬಂದ ಖದೀಮರು ಮಾಲಕಿಯ ಚಿನ್ನ ಸರ ಕಸಿದು ಪರಾರಿ
ಗ್ರಾಹಕರ ಸೋಗಿನಲ್ಲಿ ಬಂದು ಮಾಲಕಿಯ ಚಿನ್ನ ಸರ ಕಸಿದು ಪರಾರಿ

ಬಂಟ್ವಾಳ: ಹೊಟೇಲ್‌ ಮಾಲಕಿಯ 15 ಗ್ರಾಂ ತೂಕದ ಕರಿಮಣಿ ಸರವನ್ನು ಗ್ರಾಹಕರ ಸೋಗಿನಲ್ಲಿ ಬೈಕಿನಲ್ಲಿ ಆಗಮಿಸಿದ ಇಬ್ಬರು ಕಳ್ಳರು ದೋಚಿ ಪರಾರಿಯಾದ ಘಟನೆ ಮೇ 16ರಂದು ನಡೆದಿದೆ.

ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ನಿವಾಸಿ ಆಶಾ ಅವರು ತಮ್ಮ ಪತಿಯ ಜತೆ ಸೇರಿ ಪಚ್ಚಿನಡ್ಕದಲ್ಲಿ ಹೊಟೇಲ್‌ ನಡೆಸುತ್ತಿದ್ದು, ಮೇ 16ರಂದು ಮುಂಜಾನೆ 5.20ರ ಸುಮಾರಿಗೆ ತಿಂಡಿ ತಯಾರಿಸುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಆಗಮಿಸಿದ್ದರು. ಅವರಲ್ಲಿ ಸಹಸವಾರ ಹೆಲ್ಮೆಟ್‌ ಧರಿಸಿ ಹೊಟೇಲಿಗೆ ಬಂದು ಆಶಾ ಅವರಲ್ಲಿ ಸಿಗರೇಟ್‌ ಕೇಳಿ ಪಡೆದು ಅದನ್ನು ಹೊರಗೆ ನಿಂತಿದ್ದ ಬೈಕ್‌ ಸವಾರನಿಗೆ ನೀಡಿದ್ದ.

ಬಳಿಕ ಮತ್ತೆ ಆಗಮಿಸಿ ಚುಯಿಂಗ್‌ ಗಮ್‌ ಹಾಗೂ ಸೋಡಾ ಕುಡಿಯಲು ಕೇಳಿ ಖಾಲಿ ಬಾಟಲಿಯನ್ನು ಟೇಬಲ್‌ನಲ್ಲಿ ಇರಿಸಿ, ಪಕ್ಕದಲ್ಲೇ ನಿಂತಿದ್ದ ಆಶಾ ಅವರ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾನೆ.

ಸುಮಾರು 15 ಗ್ರಾಂ ತೂಕದ ಕರಿಮಣಿ ಸರದ ಮೌಲ್ಯ 75 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!