ಕಾರ್ಕಳದ ಬೈಲೂರಿನ ಉಮಿಕುಂಜ ಬೆಟ್ಟದಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ ಪರಶುರಾಮ್ ಥೀಮ್ ಪಾರ್ಕ್ ನ ಪುತ್ಥಳಿ ವಿವಾದಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಈ ಬಗ್ಗೆ ಮಾಧ್ಯಮಗಳು ದೊಡ್ಡ ಮಟ್ಟಿನಲ್ಲಿ ಸುದ್ದಿ ಮಾಡಿದ್ದರೂ, ಸಾರ್ವಜನಿಕರು, ಹಿತರಕ್ಷಕರೂ ತುಳುನಾಡಿನ ಸೃಷ್ಟಿಕರ್ತ ಪರಶುರಾಮರಿಗಾದ ಅವಮಾನದ ಬಗ್ಗೆ ಧ್ವನಿ ಎತ್ತಿದರೂ ಈ ವಿವಾದಕ್ಕೆ ಇನ್ನೂ ಚುಕ್ಕಿ ಬಿದ್ದಿಲ್ಲ ಅನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಪರಶುರಾಮ ದೇವರಿಗೆ ಅವಮಾನ..!
ತುಳುನಾಡಿನ ನಿರ್ಮಾತೃ ಪರಶುರಾಮರನ್ನು ನೆನಪಿಸುವ, ಹಾಗೂ ಅವರಿಗೆ ಗೌರವ ಸೂಚಕವಾಗಿ ಲೋಹದಿಂದಲೇ ನಿರ್ಮಾಣ ಮಾಡಿದ್ದ ಪ್ರತಿಮೆ ಲೋಕರ್ಪಣೆಗೊಂಡು ಕೆಲವೇ ತಿಂಗಳಲ್ಲೇ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು.
ಜನವರಿ 2023 ರಂದು ಉದ್ಘಾಟನೆ
ಕೈಯಲ್ಲಿ ಬಿಲ್ಲು, ಕೊಡಲಿ ಹಿಡಿದುಕೊಂಡ ಸಂಪೂರ್ಣ ಕಂಚಿನಲ್ಲೇ ತಯಾರಿಸಲಾಗಿದೆ ಎಂದು ಹೇಳಲಾದ ಪರಶುರಾಮನ ಮೂರ್ತಿಯನ್ನು 2023 ಜನವರಿ 27ನೇ ತಾರೀಖಿನಂದು ಲೋಕಾರ್ಪಣೆ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿದ್ದರು. 33 ಅಡಿ ಎತ್ತರದ ಪ್ರತಿಮೆಗೆ 15 ಟನ್ ಕಂಚು ಮತ್ತು ಉಕ್ಕು ಬಳಸಲಾಗಿತ್ತು ಎಂದು ಹೇಳಲಾಗಿತ್ತು. ಇಡೀ ಥೀಮ್ ಪಾರ್ಕ್ ಅನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಬೃಹತ್ತಾದ ಪರಶುರಾಮನ ಪುತ್ಥಳಿ, ಬಯಲು ರಂಗ ಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರ ಇವೆ.
ಉಕ್ಕು ಮತ್ತು ಕಂಚಿನ ಪುತ್ಥಳಿಗಿಂತ ಕಡಿಮೆ ಖರ್ಚಿನಲ್ಲಿ ಈ ಪುತ್ಥಳಿ ನಿರ್ಮಿಸಲಾಗಿದೆ. ಕಂಚು, ಉಕ್ಕು ಬಳಸಲಾಗಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಾಕ್ಷ್ಯಾಧಾರ ಎಂಬ0ತೆ ಹಲವು ವಿಡಿಯೋಗಳು ವೈರಲ್ ಆಗಿತ್ತು. ಕಂಚಿನ ಪ್ರತಿಮೆ ಎಂದು ನಂಬಿಸಿ ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಪುತ್ಥಳಿಯಲ್ಲಿ ಲೋಪ ಇದೆ ಸರಿಪಡಿಸುತ್ತೇವೆ ಎಂಬ ಮಾತುಗಳು ವಿವಾದದ ಆದಿಯಲ್ಲಿಯೇ ಕೇಳಿಬಂದಿದ್ದರು, ಈ ವಿವಾದಕ್ಕೆ ವರ್ಷಗಳೇ ಕಳೆದರೂ ಇನ್ನು ಅಂತ್ಯ ಕಂಡಿಲ್ಲ. ಕಾರ್ಕಳದಲ್ಲಿ ಇದು ದೇವರಿಗೆ ಅವಮಾನ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿದ್ದು, ಸದ್ಯ ಪುತ್ಥಳಿಯ ಪರಿಸ್ಥಿತಿ ನೊಡಿದರೇ ಸಾಕು ರಾಜಕೀಯಕ್ಕಾಗಿ ದೇವರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಅವಮಾನವೇ ಸಾಕು ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬಂದಿದೆ.
ಕಾಂಗ್ರೆಸ್ ಆರೋಪಗಳಿಗೆ ಪೂರಕವಾಗಿ ಈ ಪುತ್ಥಳಿಯ ಸತ್ಯಾಸತ್ಯತೆಗಳು ಬಹಿರಂಗವಾಗಬೇಕು ಎಂದು ಕೂಗೆಬ್ಬಿಸಿದ್ದರು. ಇದೆಲ್ಲದರ ನಡುವೆ, 2023ರ ಅಕ್ಟೋಬರ್ ತಿಂಗಳಲ್ಲಿ ಥೀಮ್ ಪಾರ್ಕ್ ನಲ್ಲಿದ್ದ ಪುತ್ಥಳಿ ಏಕಾಏಕಿ ನಾಪತ್ತೆಯಾಗಿತ್ತು.! ಇದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿತ್ತು. ಈಗ ಜನರು ಪುತ್ಥಳಿಯ ಸತ್ಯಾಸತ್ಯತೆ ಸಾಬೀತುಪಡಿಸಿ ಎಂದಾಗ ಮೂರ್ತಿಯನ್ನು ಹೊತ್ತೊಯ್ದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಕೆಲವೊಂದು ವಿಡಿಯೋಗಳು ಇದು ಕಂಚಿನ ಮೂರ್ತಿಯಲ್ಲ, ಫೈಬರ್ನಿಂದ ಮಾಡಲಾಗಿದೆ ಎಂಬ ವಿಡಿಯೋಗಳು ಹರಿದಾಡಿತ್ತು. ಸದ್ಯದ ಪರಿಸ್ಥಿತಿ ಬಗ್ಗೆ ಯಾವುದೇ ಸಂಘ ಸಂಸ್ಥೆಗಳು ಯಾಕೆ ಸುಮ್ಮನಿವೆ. ಬಿಜೆಪಿಯಿಂದ ಇಂತಹ ನಡೆ ನಿಜಕ್ಕೂ ಬೇಸರ ಇನ್ನು ಈ ವಿವಾದ ಹುಟ್ಟಿಕೊಂಡ ಬೆನ್ನಲ್ಲೇ ಪರಶುರಾಮರಿಗೆ ಅವಮಾನ ಮಾಡಿದ್ದನ್ನು ಕಾಂಗ್ರೆಸ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ವಿರೋಧ ಮಾಡಿದ್ದವು. ಸ್ವತಃ ಬಿಜೆಪಿ ಕಾರ್ಯಕರ್ತರಿಗೆ ಈ ಬೆಳವಣಿಗೆ ಮುಖಕ್ಕೆ ಮಸಿ ಬಳಿದಂತೆ ಆಗಿತ್ತು. ಈಗ ಈ ಥೀಮ್ ಪಾರ್ಕ್ ಸಾರ್ವಜನಿಕರಿಗೆ ಪ್ರವೇಶ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿಯೇ ಈ ಬಗ್ಗೆ ಇಂತಹ ಧೋರಣೆ ತಳೆದಿರುವುದು ಲಕ್ಷಾಂತರ ತುಳುವರಿಗೆ ಬೇಸರ ತರಿಸಿದೆ. ಬೇರೆ ಪಕ್ಷ ಆಗಿದ್ದಲ್ಲಿ ಇಂತಹ ಲೂಟಿ ಕೆಲಸ, ಧಾರ್ಮಿಕ ನಂಬಿಕೆಯನ್ನು ಕೆಡವುದು ಒಂದೆಡೆಯಾದರೆ, ಹಿಂದುತ್ವದ ಭದ್ರ ಬುನಾದಿಯಾದ ಕರಾವಳಿಯಲ್ಲೇ ಇಂತಹ ಅವಮಾನ ನಡೆದಿರುವುದು ಲಕ್ಷಾಂತರ ಮಂದಿಗೆ ಬೇಸರ ತರಿಸಿದೆ. ನಮ್ಮ ಮಾಧ್ಯಮ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿದಾಗಲೂ ಇದೆ ಮಾತುಗಳು ಹೆಚ್ಚಾಗಿ ಕೇಳಿಬಂದಿದೆ, ಆಕ್ರೋಶಕ್ಕೂ ಕಾರಣವಾಗಿದೆ. ಸದ್ಯ ನಮ್ಮ ಮನವಿಯೂ ಕೂಡ ಆದಷ್ಟು ಬೇಗ ಅರ್ಧಂಬರ್ಧ ರೀತಿಯಲ್ಲಿ ಉಳಿದಿದರುವ ಪ್ರತಿಮೆಯನ್ನು ತಕ್ಷಣ ತೆರವುಗೊಳಿಸಬೇಕು. ನಂತರ ಮುಂದಿನ ಕೆಲಸ ಮುಂದುವರಿಯಲಿ. ಆದಷ್ಟು ಬೇಗ ಪರಶುರಾಮರ ಮೂರ್ತಿ ಕಣ್ತುಂಬಿಕೊಳ್ಳುವ ಭಾಗ್ಯ ನಮಗೆ ಸಿಗಬೇಕಾಗಿದೆ.
Comments
0 comment