ಒಂದು ತಿಂಗಳ ಹಿಂದೆಯಷ್ಟೇ ದಲಿತ ಹುಡುಗಿ ರುಬಿಕಾ ಪಹಾಡಿನ್ರನ್ನು ತನ್ನ ಪ್ರಿತೀಯ ಬಲೆಗೆ ಬೀಳಿಸಿಕೊಂಡು ಮದುವೆಯಾಗಿದ್ದ ದಿಲ್ದಾರ್, ಎಲೆಕ್ಟ್ರಿಕ್ ಕಟರ್ ಬಳಸಿ ಆಕೆಯನ್ನು 50 ಪೀಸ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ದೆಹಲಿಯ ಶ್ರದ್ಧಾ ಕೊಲೆ ಕೇಸ್ ಬಗ್ಗೆ ದೇಶಾದ್ಯಂತ ಆಕ್ರೋಶ ಇರುವಾಗಲೇ ಅದಕ್ಕಿಂತಲೂ ಭೀಕರವಾದ ಕೊಲೆ ಪ್ರಕರಣ ಜಾರ್ಖಂಡ್ನಲ್ಲಿ ನಡೆದಿದೆ. ದೆಹಲಿಯಲ್ಲಿ ಅಫ್ತಾಬ್ ಪೂನಾವಾಲಾ, ಶ್ರದ್ಧಾ ವಾಕರ್ಳನ್ನು ಕೊಲೆ ಮಾಡಿ 35 ಪೀಸ್ ಮಾಡಿದ್ದರೆ, ಜಾರ್ಖಂಡ್ನ ಸಾಹೇಬ್ಗಂಜ್ನಲ್ಲಿ 25 ವರ್ಷದ ದಿಲ್ದಾರ್ ಅನ್ಸಾರಿ ತನ್ನ ಪತ್ನಿ ದಲಿತ ಹುಡುಗಿ ರುಬಿಕಾ ಪಹಾಡಿನ್ರನ್ನು ಕೊಲೆ ಮಾಡಿದ್ದಲ್ಲದೆ, ಎಲೆಕ್ಟ್ರಿಕ್ ಕಟರ್ ಬಳಸಿ 50ಕ್ಕಿಂತಲೂ ಅಧಿಕ ಪೀಸ್ ಮಾಡಿದ್ದಾನೆ. ಈ ಪೈಶಾಚಿಕ ಕೃತ್ಯದ ಬಗ್ಗೆ ಇಡೀ ನಗರದಲ್ಲಿ ಆಘಾತ ವ್ಯಕ್ತವಾಗಿದೆ. ಆಕೆಯ ದೇಹದ ಕೆಲವು ಭಾಗಗಳು ಮನೆಯಲ್ಲಿಯೇ ದೊರೆತಿದ್ದರೆ, ಇನ್ನೂ ಕೆಲವು ಭಾಗಗಳು ನಗರದ ನಿರ್ಜನ ಪ್ರದೇಶಗಳಲ್ಲಿ ದಿಲ್ದಾರ್ ಅನ್ಸಾರಿ ಎಸೆದಿದ್ದಾನೆ. ಅದರಲ್ಲಿ ಕೆಲವೊಂದು ಪೀಸ್ಗಳನ್ನು ನಾಯಿಗಳು ಎಳೆದುಕೊಂಡು ತಿಂದಿವೆ. ಮಾನವನ ದೇಹದ ಭಾಗಗಳನ್ನು ನಾಯಿಗಳು ತಿನ್ನುತ್ತಿರುವುದನ್ನು ಕಂಡ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯವರೆಗೂ ಪೊಲೀಸರು ರುಬಿಕಾಳ ದೇಹದ 18 ಪೀಸ್ಗಳನ್ನು ಪತ್ತೆ ಮಾಡಿ ಅದನ್ನು ಪ್ಲಾಸ್ಟಿಕ್ ಕವರ್ನಲ್ಲಿ ಪ್ಯಾಕ್ ಮಾಡಿದ್ದು, ಆಕೆಯ ದೇಹದ ಇತರ ಭಾಗಗಳು ಹಾಗೂ ತಲೆಗಾಗಿ ಹುಡುಕಾಟ ನಡೆಯುತ್ತಿದೆ.
ಪೊಲೀಸರು ಸಾಕಷ್ಟು ಶೋಧ ಕಾರ್ಯ ನಡೆಸಿದರೂ, 22 ವರ್ಷದ ರುಬಿಕಾಳ ತಲೆ ಮಾತ್ರ ಪತ್ತೆಯಾಗಿಲ್ಲ. ರುಬಿಕಾ ಪಹಾಡಿನ್ ಸ್ಥಳೀಯ ಆದಿಮ್ ಪಹಾರಿಯಾ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಲ್ಲಿನ ಸಾಹೇಬ್ಗಂಜ್ನ ದೋಡಾ ಪರ್ವತ ಪ್ರದೇಶದ ನಿವಾಸಿ. ಕೆಲವು ವರ್ಷಗಳಿಂದ ರುಬಿಕಾ ಹಾಗೂ ದಿಲ್ದಾರ್ ಪ್ರೀತಿ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಅವರು ವಿವಾಹ ಬಂಧನಕ್ಕೆ ಒಳಪಟ್ಟಿದ್ದರು. ಇದು ದಿಲ್ಡಾರ್ಗೆ 2ನೇ ಮದುವೆಯಾಗಿತ್ತು. ಈ ವಿಚಾರದಲ್ಲಿ ದಿಲ್ಡಾರ್ ಹಾಗೂ ರುಬಿಕಾ ನಡುವೆ ಪ್ರತಿ ದಿನವೂ ಗಲಾಟೆ ನಡೆಯುತ್ತಿತ್ತು. ಈ ಮದುವೆಯನ್ನು ರುಬಿಕಾ ಮತ್ತು ದಿಲ್ದಾರ್ ಕುಟುಂಬ ಸದಸ್ಯರು ಕೂಡ ಒಪ್ಪಿರಲಿಲ್ಲ. ಆರು ಮಂದಿ ಒಡಹುಟ್ಟಿದವರಲ್ಲಿ ರುಬಿಕಾ 3ನೆಯವರಾಗಿದ್ದಾರೆ.
ಪೊಲೀಸರು ಈಗಾಗಲೇ ದೇಹದ ಕೆಲಪು ಪೀಸ್ಗಳನ್ನು ಪತ್ತೆ ಮಾಡಿದ್ದಾರೆ. ಆರೋಪಿ ದಿಲ್ದಾರ್ ಅನ್ಸಾರಿಯನ್ನು ಬೆಲಾ ಟೋಲಾದಲ್ಲಿ ಬಂಧನ ಮಾಡಿದ್ದಾರೆ. ಆತನ ಸುಳಿವಿನ ಮೇರೆಗೆ ಅಂಗನವಾಡಿ ಕೇಂದ್ರದಿಂದ ಸುಮಾರು 300 ಮೀಟರ್ ದೂರದಲ್ಲಿರುವ ಮಂಜ್ ಟೋಲಾ ಎಂಬಲ್ಲಿ ಬೀಗ ಹಾಕಿದ ಮನೆಯೊಂದರಿಂದ ಮೃತದೇಹದ ಕೆಲವು ಪೀಸ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೇಹದ ಕೆಲವು ಪೀಸ್ಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಹಾಗಯೇ ಬಿದ್ದಿದ್ದರೆ, ಇನ್ನೂ ಕೆಲವು ಪೀಸ್ಗಳನ್ನು ಗೋಣಿಚೀಲದಲ್ಲಿ ಕಟ್ಟಿ ಇಡಲಾಗಿತ್ತು. ಶವ ಪತ್ತೆಯಾದ ಸ್ಥಳವು ದಿಲ್ದಾರ್ನ ತಾಯಿಯ ಸಂಬಂಧಿಯ ಮನೆಯಾಗಿದೆ. ಶುಕ್ರವಾರ ರುಬಿಕಾಳನ್ನು ದಿಲ್ದಾರ್ ಕತ್ತು ಸೀಳಿ ಕೊಲೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಬಳಿಕ ಎಲೆಕ್ಟ್ರಿಕ್ ಕಟರ್ ಬಳಸಿ 50 ಪೀಸ್ಗಳನ್ನಾಗಿ ಮಾಡಿದ್ದಾನನೆ. ಶನಿವಾರ ಸಂಜೆ ಪೊಲೀಸರಿಗೆ ದೇಹದ ಭಾಗಗಳು ಪತ್ತೆಯಾಗಿವೆ.
ಈತನ ಮೊದಲ ಪತ್ನಿಯೂ ಆತನೊಂದಿಗೆ ವಾಸವಾಗಿದ್ದಳು. ಮದುವೆಯಾದ ದಿನದಿಂದ ಮನೆಯಲ್ಲಿ ಕಲಹ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಇದುವರೆಗಿನ ತನಿಖೆಯಲ್ಲಿ 18 ಪೀಸ್ಗಳು ಪತ್ತೆಯಾಗಿವೆ. ಇದರೊಂದಿಗೆ ಆಯುಧವೂ ಪತ್ತೆಯಾಗಿದ್ದು, ತನಿಖೆ ನಡೆಸಲಾಗುತ್ತಿದೆ. ರುಬಿಕಾ ನಾಪತ್ತೆಯಾಗಿರುವ ಬಗ್ಗೆ ಪತಿ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಆದರೆ ಅವರು ಮತ್ತು ಅವರ ಕುಟುಂಬದವರು ಘಟನೆಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರೂ 2 ವರ್ಷಗಳಿಂದ ಸಂಬಂಧ ಹೊಂದಿದ್ದು, ಒಂದು ತಿಂಗಳ ಹಿಂದೆಯಷ್ಟೇ ಇಬ್ಬರೂ ಪ್ರೇಮ ವಿವಾಹವಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ತುಂಡಾಗಿ ಕತ್ತರಿಸಿದ್ದು ಏಕೆ ಎನ್ನುವುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸಾಕ್ಷ್ಯವನ್ನು ಮರೆಮಾಚುವ ಕಾರಣಕ್ಕೆ ದೇಹವನ್ನು ಈ ರೀತಿಯಾಗಿ ಕತ್ತರಿಸಲಾಗಿದೆ. ಕುಟುಂಬ ಸದಸ್ಯರನ್ನೂ ಕೂಡ ಬಂಧಿಸಲಾಗಿದೆ. ಎಲ್ಲರನ್ನೂ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಡಿಐಜಿ ಸುದರ್ಶನ್ ಮಂಡಲ್ ಮಾಹಿತಿ ನೀಡಿದ್ದಾರೆ.
ಮದುವೆ ಮಾಡಿಸಿದ್ದ ಪೊಲೀಸರು: ರಿಬಿಕಾ ಮತ್ತು ದಿಲ್ದಾರ್ ಬಹಳ ದಿನಗಳಿಂದ ಪ್ರೇಮ ಸಂಬಂಧ ಹೊಂದಿದ್ದರು, ಆದರೆ ಎರಡೂ ಮನೆಯವರು ಮದುವೆಗೆ ಸಿದ್ಧರಿರಲಿಲ್ಲ. ರುಬಿಕಾ ಅವರ ತಂದೆ ಸುರ್ಜಾ ಪಹಾಡಿಯಾ ಮತ್ತು ತಾಯಿ ಚಾಂಡಿ ಪಹಾಡಿನ್ ಇಬ್ಬರ ಸಂಬಂಧವನ್ನು ವಿರೋಧಿಸಿದ್ದರು. ಆದರೆ ಒಂದು ತಿಂಗಳ ಹಿಂದೆ ಇಬ್ಬರೂ ಮನೆಯಿಂದ ಓಡಿಹೋಗಿ ಪೊಲೀಸ್ ಠಾಣೆಗೆ ಬಂದಿದ್ದರು. ಇಲ್ಲಿ ಪೊಲೀಸರು ಇಬ್ಬರಿಗೂ ಮದುವೆ ಮಾಡಿಸಿದ್ದರು. ಮೃತದೇಹದ ತುಂಡುಗಳು ಸಿಕ್ಕ ಬಳಿಕ ಪೊಲೀಸರಿಗೆ ಇದು ರುಬಿಕಾ ಆಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ದಿಲ್ದಾರ್ ಮನೆಗೆ ಬಂದು ರಿಬಿಕಾ ಬಗ್ಗೆ ವಿಚಾರಿಸಿದ್ದಾರೆ. ಆಗ ಇಡೀ ವಿಷಯ ಬೆಳಕಿಗೆ ಬಂದಿದೆ.
Comments
0 comment