ಮಂಗಳೂರು: ಕಳ್ಳತನ ಮಾಡಿ ಹಣ ಹೂತಿಟ್ಟಿದ್ದ ಕಳ್ಳ.. ಹಣ ಸಿಕ್ಕಿದ್ದು ಜೆಸಿಬಿ ಚಾಲಕನಿಗೆ.!
ಅಪರೂಪದ ಕಳ್ಳತನ ಪ್ರಕರಣ

ಮಂಗಳೂರು: ಒಂದು ಅಪರೂಪದ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಹೂವಿನ ಅಂಗಡಿಯಿಂದ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಆದರೆ ಈ ಕಳ್ಳತನದ ಸ್ಟೋರಿ ಮಾತ್ರ ಸ್ವಲ್ಪ ಡಿಪರೆಂಟ್ ಆಗಿದೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿಯ ಪಡಂಗಡಿ ಗ್ರಾಮದ ಹಮೀದ್ ಕುಂಞಮೋನು ಜಾಫರ್ (48 ವ) ಎಂದು ಗುರುತಿಸಲಾಗಿದೆ. ಇತನ ಮೇಲೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 22ಕ್ಕೂ ಹೆಚ್ಚು ಪ್ರಕರಣಗಳು ಮತ್ತು ವಿವಿಧ ನ್ಯಾಯಾಲಯಗಳಲ್ಲಿ 22 ವಾರೆಂಟ್ ಇತ್ತು.

ನವೆಂಬರ್ 16ರ ತಡರಾತ್ರಿ ಕೆಎಸ್ ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಹೋಲ್ ಸೇಲ್ ಅಂಗಡಿಯಲ್ಲಿ ಸುಮಾರು 9 ಲಕ್ಷ ರೂ ಕಳವಾಗಿತ್ತು. ಇದರ ಜೊತೆ ಸಿಸಿ ಕ್ಯಾಮರಾದ ಡಿವಿಆರ್ ಕೂಡಾ ಕಳವು ಮಾಡಲಾಗಿತ್ತು. 9 ಲಕ್ಷ ಕಳವು ಮಾಡಿದ್ದ ಜಾಫರ್ ಸ್ವಲ್ಪ ಹಣವನ್ನು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಹಳೆ ಕಟ್ಟಡ ಒಂದರಲ್ಲಿ ಹೂತಿಟ್ಟಿದ್ದ.

ಆದರೆ ಆತನ ದುರಾದೃಷ್ಠಕ್ಕೆ ಎರಡೇ ದಿನಕ್ಕೆ ಆ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು. ಕಳ್ಳ ಹೂತಿಟ್ಟಿದ್ದ ಹಣ ಕಟ್ಟಡದ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಚಾಲಕನಿಗೆ ಸಿಕ್ಕಿತ್ತು, ಆತ ಅದನ್ನು ಖರ್ಚು ಮಾಡಿದ್ದ.

ಪೊಲೀಸರು ಹಳೆಯ ಕಳ್ಳತನ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸುತ್ತಿದ್ದ ಸಂದರ್ಭ ಸಂಶಯದ ಮೇಲೆ ಆರೋಪಿ ಜಾಫರ್ ನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ಕಳ್ಳತನದ ಬಗ್ಗೆ ಬಾಯಿಬಿಟ್ಟಿದ್ದಾನೆ.

ಇದೀಗ ಹಮೀದ್ ಬಂಧನದ ಬಳಿಕ ಆತ ಹಣವನ್ನು ಹೂತಿಟ್ಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರು ತಪಾಸಣೆ ನಡೆಸಿದ್ದು 5.80 ಲಕ್ಷ ರೂ ವಶಕ್ಕೆ ಪಡೆದಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!