ಮಂಗಳೂರು: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಂಜೆ ಬಳಿಯ ನಂದಿನಿ ನದಿಯಲ್ಲಿ ಕಳೆದ ಒಂದು ತಿಂಗಳಿನಿಂದ ಅಕ್ರಮವಾಗಿ ಯಾಂತ್ರೀಕೃತ ಮರಳುಗಾರಿಕೆ ನಡೆಯುತ್ತಿದ್ದು ನದಿ ತೀರದ ಕೃಷಿಕರಿಗೆ ಆತಂಕ ಎದುರಾಗಿದೆ ಎಂದು ಅಲ್ಲಿನ ಸ್ಥಳೀಯ ಸಾರ್ವಜನಿಕರು ಸೇರಿ ಗ್ರಾಮ ಪಂಚಾಯತಿಗೆ ದೂರು ಸಲ್ಲಿಸಿದ್ದಾರೆ.
ನಂದಿನಿ ನದಿ ತೀರದ ಪ್ರದೇಶದಲ್ಲಿನ ಕೃಷಿಕರು ತಮ್ಮ ಕೃಷಿ ಚಟುವಟಿಕೆಯಲ್ಲಿ ನಂದಿನಿ ನದಿಯ ನೀರನ್ನು ಅವಲಂಭಿಸಿದ್ದು, ಇದೀಗ ಆ ಭಾಗದಲ್ಲಿ ಅಕ್ರಮವಾಗಿ ಯಾಂತ್ರಿಕೃತ ಮರಳುಗಾರಿಕೆ ನಡೆಸುತ್ತಿರುವುದರಿಂದ ನದಿ ಭಾಗದಲ್ಲಿ ಬಹಳಷ್ಟು ಆಳ ತುಂಬಿದ್ದು ಈಗಾಗಲೇ ತೀರ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿ ಕೃಷಿಕರಿಗೆ ಬಹಳ ಸಮಸ್ಯೆಯಾಗಿದೆ.
ಕೃಷಿಕರು ಮತ್ತು ಗ್ರಾಮಸ್ಥರು ಸೇರಿಕೊಂಡು ಹಳೆಯಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.
ಅಲ್ಲದೆ ಕೂಡಲೇ ಇದರ ಬಗ್ಗೆ ಸ್ಥಳೀಯ ಆಡಳಿತ ಗಮನಹರಿಸಿ ಯಾಂತ್ರಿಕೃತ ಮರಳುಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕಾಗಿ ವಿನಂತಿಸಿ ಕೊಂಡಿದ್ದಾರೆ.