ಮಂಗಳೂರು: ಭ್ರಷ್ಟಾಚಾರ-ಆದಾಯಕ್ಕಿಂತ ಜಾಸ್ತಿ ಆಸ್ತಿ ಮಾಡಿದ್ದ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ

ಭ್ರಷ್ಟ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಲಂಚ ಹಾಗೂ ಭ್ರಷ್ಟಾಚಾರದ ಮೂಲಕ ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿದ ಮೂಲ್ಕಿ ನಗರ ಪಂಚಾಯಿತಿಯ ಕಿರಿಯ ಎಂಜಿನಿಯರ್‌ ಎನ್‌.ಕೆ.ಪದ್ಮನಾಭಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ₹ 26.5 ಲಕ್ಷ ದಂಡ ಹಾಗೂ 4 ವರ್ಷಗಳ ಕಾರಾಗೃಹವಾಸ ಶಿಕ್ಷೆ ವಿಧಿಸಿದೆ.

ಅಪರಾಧಿಯು ದಂಡ ಕಟ್ಟಲು ತಪ್ಪಿದರೆ ಮತ್ತೆ ಆರು ತಿಂಗಳು ಸಾದಾ ಸಜೆ ಅನುಭವಿಸಬೇಕು’ ಎಂದು ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಗುರುವಾರ ಆದೇಶ ಮಾಡಿದ್ದಾರೆ. ಎನ್‌.ಕೆ.ಪದ್ಮನಾಭ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಬಗ್ಗೆ 2015ರ ಫೆಬ್ರುವರಿಯಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ಬಂದಿತ್ತು. ಅವರ ಮನೆಗೆ ಲೊಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 13(1)(ಇ) ಹಾಗೂ 13(2) ಅಡಿ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ನವೀನ್‌ ಚಂದ್ರ ಜೋಗಿ ಅವರು ಈ ಪ್ರಕರಣದ ತನಿಖೆ ನಡೆಸಿದ್ದರು. ಇಲಾಖೆಯ ಇನ್‌ಸ್ಪೆಕ್ಟರ್‌ ಭಾರತಿ.ಜಿ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದಲ್ಲಿ ವಕೀಲ ರವೀಂದ್ರ ಮುನ್ನಿಪಾಡಿ ಅವರು ಲೋಕಾಯುಕ್ತದ ಪರ ವಾದ ಮಂಡಿಸಿದ್ದರು.