ಬಂಟ್ವಾಳ: ಚಿರತೆ ದಾಳಿ - ಮೇಯಲು ಬಿಟ್ಟಿದ್ದ ದನ ಸಾವು

ಚಿರತೆ ದಾಳಿ - ಮೇಯಲು ಬಿಟ್ಟಿದ್ದ ದನ ಸಾವು

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಎಂಬಲ್ಲಿ ತೋಟದಲ್ಲಿದ್ದ ದನವೊಂದನ್ನು ರಾತ್ರಿ ವೇಳೆ ಚಿರತೆ ದಾಳಿ ನಡೆಸಿ ಕೊಂದ ಘಟನೆ ನಡೆದಿದೆ.

ಕೇಲ್ದೊಡಿ ನಿವಾಸಿ ಶೀನಪ್ಪ ಪೂಜಾರಿ ಅವರ ತೋಟದಲ್ಲಿದ್ದ ದನವನ್ನು ಭಾಗಶಃ ತಿಂದು ಹಾಕಿದ ಬೆಳಕಿಗೆ ಬಂದಿದೆ.

ಇನ್ನು ತೋಟಕ್ಕೆ ಎರಡು ದನಗಳನ್ನು ಮೇಯಲು ಬಿಟ್ಟಿದ್ದು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಅದು ತೋಟದಲ್ಲಿಯೇ ಮಲಗಿದ್ದು, ಮತ್ತೊಂದು ದನ ಮನೆಯಲ್ಲಿತ್ತು. ಬೆಳಗ್ಗೆ ಎದ್ದು ನೋಡುವಾಗ ತೋಟದಲ್ಲಿ ಮಲಗಿದ್ದ ದನ ನಾಪತ್ತೆಯಾಗಿತ್ತು. ಹಾಗಾಗಿ ಮನೆಯವರು ಹುಡುಕಿದಾಗ ತೋಟದ ಒಂದು ಮೂಲೆಯಲ್ಲಿ ಅರ್ಧ ದನದ ಕಳೇಬರ ಪತ್ತೆಯಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು,ಸ್ಥಳೀಯ ಪಶು ವೈದ್ಯಾಧಿಕಾರಿ ಅವಿನಾಶ್ ಭಟ್ ಹಾಗೂ ಸ್ಥಳೀಯ ಗ್ರಾ.ಪಂ.ಲಕ್ಷಣ್ ಅವರು ಭೇಟಿ ನೀಡಿದ್ದಾರೆ.