ತಿರುಪತಿ ಯಾತ್ರೆಗೆ ತೆರಳಿದ ಸಂದರ್ಭ ಮನೆಯ ಬೀಗ ಒಡೆದು ಚಿನ್ನಾಭರಣ ಕಳ್ಳತನ
ಕುಂದಾಪುರ: ಮನೆಯವರು ತಿರುಪತಿ ಯಾತ್ರೆಗೆ ತೆರಳಿದ್ದ ಸಂದರ್ಭ ಕಳ್ಳರು ಮನೆಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆ ಎಂಬಲ್ಲಿ ಸಂಭವಿಸಿದೆ.
ಸ್ಥಳೀಯರಾದ ಸುಕನ್ಯಾ ಕಿಣಿ ಎಂಬವರು ತಿರುಪತಿ ದರ್ಶನಕ್ಕೆಂದು ತೆರಳಿದ್ದರು. ಇವರು ಮನೆಗೆ ವಾಪಾಸು ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಕುಂದಾಪುರ-ಸಿದ್ದಾಪುರ ಮುಖ್ಯ ರಸ್ತೆ ಸಮೀಪದಲ್ಲೇ ಸುಕನ್ಯಾರ ಮನೆಯಿದ್ದು ತಿರುಪತಿ ದರ್ಶನ ಮುಗಿಸಿ ಬೆಳಗ್ಗೆ ಬಂದಾಗ ಮನೆಯ ಮುಖ್ಯ ದ್ವಾರದ ಬೀಗ ಒಡೆದು ಬಾವಿಗೆ ಎಸೆದಿರುವುದು ತಿಳಿದುಬಂದಿದೆ. ಮನೆಯ ಒಳಗಿನ ಕಪಾಟಿನಲ್ಲಿದ್ದ 5 ಪವನ್ ತೂಕದ ಮುತ್ತಿನ ಹವಳ ಮಿಶ್ರಿತ ಚಿನ್ನ ಒಂದು ಪವನ್ ಚಿನ್ನದ ನಾಣ್ಯ ಹತ್ತು ಸಾವಿರ ರೂ. ನಗದು ಹಾಗೂ ಬೆಳ್ಳಿ ಸಾಮಗ್ರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಶಂಕರನಾರಾಯಣ ಠಾಣೆ ಉಪನಿರೀಕ್ಷಕ ನಾಸಿರ್ ಹುಸೇನ್ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಯುತ್ತಿದೆ.
Comments
0 comment