ಉತ್ತರ ಪ್ರದೇಶದ ಗ್ಯಾಂಗ್ಸ್ಟರ್, ರಾಜಕಾರಣಿಯೂ ಆಗಿದ್ದ ಕೆಲ ತಿಂಗಳ ಹಿಂದಷ್ಟೇ ಹತ್ಯೆಗೀಡಾದ ಅತೀಕ್ ಅಹ್ಮದ್ನಿಂದ ವಶಪಡಿಸಿಕೊಂಡ ಜಾಗದಲ್ಲಿ ಉತ್ತರ ಪ್ರದೇಶ ಸರ್ಕಾರವು ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿಗಳಿಗೆ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಫ್ಲಾಟ್ಗಳನ್ನು ಹಂಚಿಕೆ ಮಾಡಿದ್ದಾರೆ.
ಪ್ರಯಾಗರಾಜ್ನ ಲುಕುವಾರ್ಗಂಜ್ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 76 ಫ್ಲಾಟ್ಗಳನ್ನು ನಿರ್ಮಿಸಲಾಗಿದೆ. ಫಲಾನುಭವಿಗಳಿಗೆ ಹಂಚಿಕೆ ಮಾಡುವ ಮೊದಲು ಯೋಗಿ ಆದಿತ್ಯನಾಥ್ ಅವರು ಅಪಾರ್ಟ್ಮೆಂಟ್ ವೀಕ್ಷಣೆ ಮಾಡಿದರು. ಇದಾದ ಬಳಿಕ 76 ಜನರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ನೀಡಿದರು. ಬಡವರನ್ನು ಗುರುತಿಸಿ, ಅವರಿಂದ ಕೇವಲ 3.5 ಲಕ್ಷ ರೂ. ಪಡೆದು ಫ್ಲಾಟ್ ನೀಡಲಾಗಿದೆ. ಜೂನ್ 9ರಂದು ಲಾಟರಿ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗಿದೆ.
2021ರ ಡಿಸೆಂಬರ್ನಲ್ಲಿ ಯೋಗಿ ಆದಿತ್ಯನಾಥ್ ಅವರು ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಜಿಲ್ಲಾ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲಾಗಿದೆ. ಬಡವರಿಗೆ ಕೈಗೆಟಕುವ ದರದಲ್ಲಿ ಫ್ಲಾಟ್ಗಳನ್ನು ನೀಡಲಾಗುತ್ತದೆ. ಗ್ಯಾಂಗ್ಸ್ಟರ್ಗಳಿಂದ ವಶಪಡಿಸಿಕೊಂಡ ಜಾಗದಲ್ಲಿ ಬಡವರಿಗೆ ಮನೆ ನಿರ್ಮಿಸಿ ಕೊಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ಯಾಂಗ್ಸ್ಟರ್ ಜತೆಗೆ ರಾಜಕಾರಣಿಯೂ ಆಗಿದ್ದ ಅತೀಕ್ ಅಹ್ಮದ್ ಹಲವರ ಆಸ್ತಿ ಕಬಳಿಸಿದ್ದ. ಹಾಗಾಗಿ, ಆತನ ಅಕ್ರಮ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ.
ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜುಪಾಲ್ ಹತ್ಯೆ ಮತ್ತು ಅವರ ಕೊಲೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿದ್ದ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ವಿರುದ್ಧ ಇನ್ನೂ ಹಲವು ಕೇಸ್ಗಳು ಇದ್ದು, ಪ್ರಯಾಗ್ರಾಜ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಅವರಿಬ್ಬರನ್ನೂ ಗುಜರಾತ್ನ ಸಬರಮತಿ ಜೈಲಿನಲ್ಲಿ ಇಟ್ಟು, ವಿಚಾರಣೆಗಾಗಿ ಇಲ್ಲಿ ಕರೆದುಕೊಂಡು ಬಂದು, ಮುಗಿಯುತ್ತಿದ್ದಂತೆ ಮತ್ತೆ ಗುಜರಾತ್ಗೆ ಕರೆದೊಯ್ಯಲಾಗುತ್ತಿತ್ತು. ಏಪ್ರಿಲ್ 15ರಂದು ಕೂಡ ಅವರಿಬ್ಬರ ವಿಚಾರಣೆ ಕೋರ್ಟ್ನಲ್ಲಿ ಮುಗಿದಿತ್ತು. ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗಲೇ ಹತ್ಯೆಯಾಗಿದೆ. ಶೂಟರ್ಗಳಾದ ಲೋಪ್ಲೇಶ್, ಸನ್ನಿ ಮತ್ತು ಅರುಣ್ನನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.
Comments
0 comment