ಚುನಾವಣೆ ಬಹಿಷ್ಕಾರಕ್ಕೆ ಸಂತ್ರಸ್ತರು ಸಹಿತ ಕುಟುಂಬಗಳ ನಿರ್ಧಾರ
ಸುರತ್ಕಲ್: ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ನೀಡಿ ಬೀದಿ ಪಾಲಾಗಿರುವ ಸಂತ್ರಸ್ತರಿಗೆ ಗೇಲ್ ಇಂಡಿಯಾ ಕಂಪೆನಿ ಉದ್ಯೋಗ ನೀಡದೇ ವಂಚಿಸುತ್ತಿದೆ. ಸಂತ್ರಸ್ತರ ಪರವಾಗಿರಬೇಕಿದ್ದ ಜಿಲ್ಲಾಡಳಿತವೂ ಮೌನಕ್ಕೆ ಶರಣಾಗಿದೆ ಎಂದು ಸಂತ್ರಸ್ತರು ದೂರಿದ್ದಾರೆ.
ಮಂಗಳೂರು ವಿಶೇಷ ಕೈಗಾರಿಕಾ ವಲಯ ಸ್ಥಾಪನೆಯ ವೇಳೆ ಸುಮಾರು 75 ಮಂದಿ ತಮ್ಮ ನಿವೇಶನಗಳನ್ನು ನೀಡಿದ್ದರು. ಇದಕ್ಕೆ ಪ್ರತಿಯಾಗಿ ನಿವೇಶನ ನೀಡಿದ್ದ ಕುಟುಂಬದ ಓರ್ವ ಸದಸ್ಯನಿಗೆ ಜೆಬಿಎಫ್ ಪೆಟ್ರೋ ಕೆಮಿಕಲ್ ಸಂಸ್ಥೆ ಟ್ರೈನಿಂಗ್ ನೀಡಿ ಖಾಯಂ ಉದ್ಯೋಗವನ್ನೂ ನೀಡಲಾಗಿತ್ತು. ಆದರೆ, ಜೆಬಿಎಫ್ ಸಂಸ್ಥೆ ಕಾರಣಾಂತರಗಳಿಂದ ಮುಚ್ಚಲ್ಪ ಟ್ಟಿತು. ಬಳಿಕ ಸರ್ಕಾರದ ನಿಯಾನುಸಾರ ಅದನ್ನು ಗೇಲ್ ಇಂಡಿಯಾ ಸಂಸ್ಥೆ ಖರೀದಿಸಿತ್ತು. ಈ ವೇಳೆ ಭೂಮಿ ನೀಡಿ ಉದ್ಯೋಗ ಪಡೆದುಕೊಂಡಿದ್ದ 75 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸ ಮಾಡುವುದಿದ್ದರೆ ಗುತ್ತಿಗೆ ನೌಕರರಾಗಿ ಕೆಲಸ ಮಾಡಬಹುದೆಂದು ಗೇಲ್ ಇಂಡಿಯಾ ನೌಕರರಿಗೆ ಸೂಚನೆ ನೀಡಿತ್ತು.
ಜೆಬಿಎಫ್ ಪೆಟ್ರೋ ಕೆಮಿಕಲ್ ಸಂಸ್ಥೆಯಲ್ಲಿ ಖಾಯಂ ಉದ್ಯೋಗದಲ್ಲಿದ್ದ ನಿರ್ವಸಿತ ನೌಕರರನ್ನು ಗೇಲ್ ಇಂಡಿಯಾ ಸಂಸ್ಥೆ ತಾತ್ಕಾಲಿಕ ನೆಲೆಯಲ್ಲಿ ಭರ್ತಿಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಮತ್ತು ನಿರ್ವಸಿತ 75 ಮಂದಿ ಕಾರ್ಮಿಕರನ್ನು ಜೆಬಿಎಫ್ ಸಂಸ್ಥೆಯಲ್ಲಿ ಇದ್ದಹಾಗೇ ಖಾಯಂ ನೌಕರರನ್ನಾಗಿಯೇ ಪರಿಗಣಿಸಬೇಕೆಂದು ಆಗ್ರಹಿಸಿ ನಿರ್ವಸಿತ ಉದ್ಯೋಗಿಗಳು ಎಂಎಸ್ಇಝೆಡ್ ಮುಖ್ಯ ದ್ವಾರದ ಬಳಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಎಸ್ ಇಝಡ್ ಜಿಲ್ಲಾಧಿಕಾರಿ ಹೇಮಲತಾ ಮತ್ತು ಗೆಲ್ ಅಧ್ಯಕ್ಷರಾದ ಆಯುಷ್ ಗುಪ್ತ ಅವರ ಜೊತೆ ಸಭೆ ನಡೆದಿತ್ತು. ಸಭೆಯಲ್ಲಿ ಕೆಲ ದಿನದ ವರೆಗೆ ನಿರ್ವಸಿತರನ್ನು ತಾತ್ಕಾಲಿಕವಾಗಿ ಉದ್ಯೋಗಕ್ಕೆ ನೇಮಿಸಿಕೊಳ್ಳುವುದು, ಮೇ 2024ರಂದು ಸರಕಾರಿ ನಿಯಮಾನುಸಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜಾಹೀರಾತು ಮೂಲಕ ಖಾಯಂ ಉದ್ಯೋಗ ನೀಡಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಒಂದು ತಿಂಗಳಾಗುತ್ತಾ ಬಂದರೂ ಇನ್ನೂ ಕೂಡ ತಾತ್ಕಾಲಿಕ ನೌಕರಿಯನ್ನು ನೀಡದಿರುವ ಕಂಪೆನಿಯ ನಡೆ ನೌಕರರನ್ನು ಗೊಂದಲಕ್ಕೀಡು ಮಾಡಿದೆ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟು ಈಗ ನೌಕರಿಯನ್ನೂ ಕಳೆದುಕೊಂಡಿಡರುವ ಸಂತ್ರಸ್ತ ನೌಕರರನ್ನು ಕೇಂದ್ರ ಸರಕಾರ ಸ್ವಾಮ್ಯದ ಕಂಪೆನಿಯಾದ ಗೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಒಂದುವರೆ ವರ್ಷಗಳಿಂದ ಸತಾಯಿಸುತ್ತಾ ಬೀದಿ ಪಾಲು ಮಾಡಿರುವುದು ದುರಾದೃಷ್ಟವೇ ಸರಿ.
Comments
0 comment