ಮಂಗಳೂರು: ನಗರ ಹೊರವಲಯದ ಗುರುಪುರದಲ್ಲಿ ಫಲ್ಗುಣಿ ನದಿಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಶವಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ನದಿಯಲ್ಲಿ ಶೋಧ ನಡೆಸುತ್ತಿದ್ದಾರೆ.
ಮೂಡುಶೆಡ್ಡೆ ನಿವಾಸಿ ಅರುಣ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೆಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಗುರುಪುರ ಸೇತುವೆಯ ಬಳಿ ಬಂದು ಅರುಣ್ ನೀರಿಗೆ ಧುಮುಕಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು ಒಂದು ಮಗುವನ್ನು ಹೊಂದಿದ್ದರು. ಯಾಕಾಗಿ ಸಾವಿಗೆ ಶರಣಾಗಿದ್ದಾರೆಂದು ತಿಳಿದುಬಂದಿಲ್ಲ.ಇಂದು ಬೆಳಗ್ಗಿನಿಂದ ಪೊಲೀಸರು, ಅಗ್ನಿಶಾಮಕ ದಳ ಸಿಬಂದಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಸ್ಥಳೀಯರು, ವಾಹನಗಳಲ್ಲಿ ಸಾಗುತ್ತಿರುವ ಮಂದಿ ವಾಹನ ನಿಲ್ಲಿಸಿ ಸೇತುವೆಯಿಂದ ಕೆಳಕ್ಕೆ ಕುತೂಹಲದಿಂದ ಇಣುಕುತ್ತಿದ್ದಾರೆ. ಯುವಕ ನದಿಗೆ ಹಾರಿರುವ ವಿಷಯ ತಿಳಿದು ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಾರೆ.
ಮಧ್ಯಾಹ್ನದ ವರೆಗೂ ಶವ ಪತ್ತೆಯಾಗಿಲ್ಲ. ಮಂಗಳೂರು ಗ್ರಾಮಾಂತರ ವಾಮಂಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
0 comment