ಮಳೆಗಾಲ ಬಂತು ಅಂತಾದರೆ ದೇಶದೆಲ್ಲೆಡೆ ಖುಷಿ ಪಡುವ ಜನರು ಅನುಭವ ಒಂದೆಡೆಯಾದರೆ, ಇನ್ನೊಂದೆಡೆ ನದಿ ತೀರ ಸಮುದ್ರ ತೀರಗಳಲ್ಲಿ ವಾಸಿಸುವ ಜನರಿಗೆ ನೆರೆಯ ಭೀತಿಯ ಸಂಕಷ್ಟ... ಇನ್ನು ನಮ್ಮ ಮಂಗಳೂರಿನ ಕಡೆ ನೋಡುವುದಾದರೆ ಕಡಲ್ಕೊರೆತಕ್ಕೆ ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿಗಳೇ ಹೆಚ್ಚು... ಅದಕ್ಕಾಗಿ ಸರ್ಕಾರದ ಸೂಚನೆಯಂತೆ ಕಡಲ್ಕೊರೆತ ಜೋರಾಗಿ ನಡೆಯುವ ಸಮುದ್ರ ತೀರಗಳಲ್ಲಿ ಕಡಲ್ಕೊರೆತದಿಂದಾಗುವ ಅನಾಹುತ ತಡೆಗಟ್ಟಲು ಸಮುದ್ರ ತೀರಕ್ಕೆ ಬೃಹತ್ ಆಕಾರದ ಕಲ್ಲುಗಳನ್ನು ಅಡ್ಡಗಟ್ಟುವ ಕಾಮಗಾರಿಯನ್ನು ಟೆಂಡರ್ ಮೂಲಕ ಸರಕಾರ ಜಾರಿಗೊಳಿಸಲಾಗುತ್ತದೆ.
ಹೀಗೆ ಸಮುದ್ರಕ್ಕೆ ತಡೆಗೋಡೆ ಕಟ್ಟುವ ಟೆಂಡರ್ 1st ಗ್ರೇಡ್ ಗುತ್ತಿಗೆದಾರರಿಗೆ ನೀಡಲಾಗುತ್ತದೆ... ಆದರೆ ಗುತ್ತಿಗೆ ಪಡೆದ ಗುತ್ತಿಗೆದಾರರು ಸರಕಾರಕ್ಕೆ ರಾಜಧನ ಕಟ್ಟದೆ, ರಾಜಾರೋಷವಾಗಿ ಬಂಡೆ ಒಡೆದು ಅದನ್ನು ಲಾರಿಗಳ ಮೂಲಕ ಕಡಲ ತೀರಕ್ಕೆ ಸಾಗಿಸುತ್ತಿರುವ ಮಾಫಿಯಾ ಬೆಳಕಿಗೆ ಬಂದಿದೆ... ಈಗ ಚಿತ್ರಾಪುರ-ಹೊಸಬೆಟ್ಟು ಸಮುದ್ರ ಕಿನಾರೆಯ ಬಳಿ ನಡೆಯುತ್ತಿರುವ ತಡೆಗೋಡೆ ಕಟ್ಟುವ ಕೆಲಸದಲ್ಲಿ ಇದೇ ರೀತಿಯ ಅಕ್ರಮ ದಿನೇ ದಿನೇ ಎಗ್ಗಿಲ್ಲದೆ ಸಾಗುತ್ತಿದೆ.
ಕಿನ್ನಿಗೋಳಿ, ಮೂಡಬಿದ್ರೆ ಕಡೆಯಿಂದ ಕೆಲವು ಬಂಡೆ ಒಡೆದು ಅದಕ್ಕೆ ಕಟ್ಟಬೇಕಾದ ಯಾವುದೇ ರಾಜಧನವನ್ನು ಕಟ್ಟದೆ, ಸರಕಾರದ ಬೊಕ್ಕಸಕ್ಕೆ ವಂಚಿಸುತ್ತಿರುವ ಘಟನೆ ನಡೆಯುತ್ತಿದೆ... ಪ್ರತಿದಿನ ಕಿನ್ನಿಗೊಳಿ, ಮೂಡಬಿದ್ರೆ ಕಡೆಯಿಂದ ಹೊರಟು ಪಕ್ಷಿಕೆರೆ, ಹಳೆಯಂಗಡಿ ಮಾರ್ಗವಾಗಿ ಸುರತ್ಕಲ್, ಬೈಕಂಪಾಡಿ ದಾಟಿಕೊಂಡು ಚಿತ್ರಾಪುರ ಸಮುದ್ರ ಕಿನಾರೆಯವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಕಲ್ಲುಗಳನ್ನು ಹೊತ್ತೊಯ್ಯುವ ಲಾರಿಗಳು ಚಲಿಸುತ್ತಿದ್ದರು ಕೂಡ ಯಾವ ಇಲಾಖೆಯು ಈ ಲಾರಿಗಳನ್ನು ತಪಾಸಣೆ ಮಾಡುವ ಕ್ರಮ ಕೈಗೊಂಡಿಲ್ಲ.
ರಾಜಾರೋಷವಾಗಿ ಅಷ್ಟೊಂದು ಗಜಗಾತ್ರದ ಕಲ್ಲುಗಳನ್ನು ಹೊತ್ತೊಯ್ಯುವ ಲಾರಿಗಳು ಹೈವೇಗಳಲ್ಲಿ ಚಲಿಸುವ ವೇಗ ಎಲ್ಲರನ್ನೂ ಬೆಚ್ಚಿ ಬೇಳಿಸುತ್ತಿವೆ... ಇದರ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರಮ ಕೈಗೊಂಡು ಸರಕಾರಕ್ಕೆ ಸೇರಬೇಕಾದ ರಾಜಧನ ಸಂದಾಯುವಿಕೆ ಆಗುವಂತೆ ಮಾಡಬೇಕಾಗಿ ನಾಗರೀಕ ವಲಯದಿಂದ ಕೇಳಿ ಬರುವ ಮಾತಾಗಿದೆ.
Comments
0 comment