ಹಳೆಯಂಗಡಿ, ಕಿನ್ನಿಗೋಳಿ ಸಮೀಪ ಬಹು ದೊಡ್ಡ ಮರಳು ಮಾಫಿಯಾ ಬಯಲು..!
ಸ್ಯಾಂಡ್ ಮಾಫಿಯಾದಲ್ಲಿ ಸುರತ್ಕಲ್‌ನ ಪ್ರಭಾವಿ ವ್ಯಕ್ತಿಯ ಕೈವಾಡ
ಹೊಸ ಕಾಯ್ದೆಗೂ ಡೋಂಟ್ ಕೇರ್

ಸರಕಾರ ಮರಳು ಅಕ್ರಮ ಸಾಗಣೆ ತಡೆಗಟ್ಟಲು ಹೊಸ ಕಾಯಿದೆ ಜಾರಿಗೆ ತಂದರೂ ಕಟ್ಟುನಿಟ್ಟಿನ ಅನುಷ್ಠಾನದಲ್ಲಿ ಅಧಿಕಾರಿಗಳ ಅಪ್ರಮಾಣಿಕತೆ ಮರಳು ಮಾಫಿಯಾಕ್ಕೆ ಕಡಿವಾಣ ಬಿದ್ದಿಲ್ಲ. ಎಲ್ಲೆಂದರಲ್ಲಿ ಅಕ್ರಮ ಮರಳು ಸಂಗ್ರಹ, ಸಾಗಿಸುವುದು ಮಿತಿ ಮೀರಿದೆ. ಹೊಸ ಮರಳು ನೀತಿಯಿಂದ ಮರಳು ಅಕ್ರಮ ಸಾಗಣೆಗೆ ಕಡಿವಾಣ ಬೀಳುತ್ತದೆ ಎಂದು ಭಾವಿಸಿದ ಪರಿಸರ ಪ್ರೇಮಿಗಳಿಗೆ ಭ್ರಮನಿರಸವಾಗಿದೆ. ಅದರಲ್ಲೂ ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಭೂ ಒಡಲಿಗೆ ಕನ್ನ ಹಾಕುವ ಖದೀಮರು ನದಿಗಳ ಒಡಲನ್ನು ಬರಿದಾಗಿಸುತ್ತಿದ್ದಾರೆ. 

ಹೌದು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಗೆ 100 ಮೀಟರ್ ಅಂತರದಲ್ಲಿ ಯಾವ ಇಲಾಖೆಗೂ ಲೆಕ್ಕಿಸದೆ ರಾಜಾರೋಷವಾಗಿ ಮರಳು ದಂಧೆ ನಡೆಸುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆ 5-6 ನಾಡ ದೋಣಿಗಳು ನೀರಿಗಿಳಿದು ಮರಳು ಹೊತ್ತು ಟಿಪ್ಪರ್ ಗೆ ಲೋಡ್ ಮಾಡಲು  ಖದೀಮರ ತಂಡ ತಯಾರಾಗುತ್ತದೆ.

ಸಂಜೆಯಿಂದ ಮುಂಜಾನೆವರೆಗೂ ನದಿ ಒಡಲಿನಿಂದ ಮರಳೆತ್ತಿ ನಿರ್ಭೀತಿಯಿಂದ ಸಾಗಾಟ ಮಾಡುತ್ತಾರೆ. ಯಾವುದೇ ಅಂಜಿಕೆ ಅಳುಕಿಲ್ಲದೆ ಸ್ಯಾಂಡ್ ಮಾಫಿಯಾ ಮುಂದುವರಿಸಲು ಪ್ರಭಾವ ವ್ಯಕ್ತಿಗಳ ಕೈವಾಡ ಇದೆ ಎಂಬುವುದು ಸ್ಪಷ್ಟವಾಗಿದೆ. ಈ ಹಳೆಯಂಗಡಿ ಮರಳುಗಾರಿಕೆಯ ರೂವಾರಿ ಸುರತ್ಕಲ್ ಮೂಲದ ಪ್ರಭಾವಿ ವ್ಯಕ್ತಿ ಎಂದು ಕೇಳಿ ಬಂದಿದೆ.

ಸಂಜೆಯಿಂದ ರಾತ್ರಿಯೆಲ್ಲಾ ಮನಬಂದಂತೆ ನದಿ ಒಡಲು ಬಗೆಯುತ್ತಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಹಾಗೂ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಕ್ರಮಕ್ಕೆ ಮುಂದಾಗಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಪಿ.ಡಿ.ಓ. ಅಧಿಕಾರಿ ಮೌನವಹಿಸಿದ್ದಾರೆ.

ಹಳೆಯಂಗಡಿ ಮಾತ್ರವಲ್ಲದೆ ಕಿನ್ನಿಗೋಳಿ ಸಮೀಪದ ಬಲ್ಕುಂಜೆ, ಪಟ್ಟೆ ಕ್ರಾಸ್ ಬಳಿಯ ಶಾಂಭವಿ ನದಿ ತೀರದಲ್ಲಿ ಮನಬಂದಂತೆ ಪ್ರಕೃತಿ ಒಡಲು ಬಗೆಯಲಾಗುತ್ತಿದೆ. ಇಲ್ಲಿಯೂ ಕೂಡ ರಾತ್ರಿಯಿಂದ ಮುಂಜನೆಯವರೆಗೂ ನಿರಂತರವಾಗಿ ಮರಳು ಸಾಗಾಟ ನಡೆಯುತ್ತಿದೆ. ನೈಸರ್ಗಿಕ ಸಂಪತ್ತು ನಿರಂತರ ಲೂಟಿ ಆಗುತ್ತಿದೆ. ಅಕ್ರಮ ದಂಧೆಕೋರರ ಅಟ್ಟಹಾಸಕ್ಕೆ ಸಂಬಂಧ ಪಟ್ಟ ಇಲಾಖೆ ಜಾಣ ಮೌನವಹಿಸಿದೆ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆಯಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!