MRPL ತ್ಯಾಜ್ಯಗಳಿಗೆ ಬಲಿಯಾಗುತ್ತಿರುವ ಫಲ್ಗುಣಿ ನದಿ.!!
ಫಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯ ಈ ಬಾರಿ ಹರಿಸಿರುವುದು MRPL. ಸಾಕ್ಷ್ಯ ಸಮೇತ ಹರಿವಿನ ಮೂಲಗಳನ್ನು ಪತ್ತೆ ಹಚ್ಚಿದ ಹೋರಾಟ ಸಮಿತಿ

ಮಂಗಳೂರು:ತುಳುನಾಡಿನ ಜೀವನದಿಗಳಲ್ಲಿ ಒಂದಾದ ಫಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ನೇರವಾಗಿ ತೋಕೂರು ಹಳ್ಳದ ಮೂಲಕ ಹರಿಯ ಬಿಡುವ ಘಾತುಕ ಕೃತ್ಯ ಎಗ್ಗಿಲ್ಲದೆ ಮುಂದುವರಿದಿದೆ. ಬೈಕಂಪಾಡಿ, ಪಣಂಬೂರು ವ್ಯಾಪ್ತಿಯ ಬಹುತೇಕ ಕಿರು, ಮಧ್ಯಮ ಕೈಗಾರಿಕೆಗಳು ಪಲ್ಗುಣಿಗೆ ವಿಷವುಣಿಸುವ ನಿಯಮ ಬಾಹಿರ ಕಾರ್ಯದಲ್ಲಿ ಭಾಗಿಯಾಗಿದ್ದರೂ, ದೇಶದ ಪ್ರತಿಷ್ಟಿತ ತೈಲ ಕಂಪೆನಿ ಎಂದು ಹೆಸರಾದ ಸಾರ್ವಜನಿಕ ರಂಗದ MRPL ಈ ಕೃತ್ಯದಲ್ಲಿ ಮುಂಚೂಣಿಯಲ್ಲಿರುವುದು ಮತ್ತೊಮ್ಮೆ ಬಹಿರಂಗಗೊಂಡಿದೆ.

ಡಿವೈಎಫ್ಐ, ಹೋರಾಟ ಸಮಿತಿಯ ಸತತ ಹೋರಾಟ, ಮಾಧ್ಯಮಗಳಲ್ಲಿ ಆದ ಸುದ್ದಿಗಳಿಂದ ವರ್ಷದ ಹಿಂದೆ ಸುಪ್ರೀಂಕೋರ್ಟ್ ನ ಹಸಿರು ಪೀಠ ಸುಮಟೊ ಮೊಕದ್ದಮೆ ದಾಖಲಿಸಿ ಜಿಲ್ಲಾಡಳಿತಕ್ಕೆ ನೋಟೀಸು ನೀಡಿತ್ತು. ತನ್ನ ತಂಡವನ್ನೂ ಪರಿಶೀಲನೆಗೆ ಕಳುಹಿಸಿತ್ತು. ಬಿ ಎಮ್ ಫಾರೂಕ್ ಅಧ್ಯಕ್ಷತೆಯ ವಿಧಾನ ಪರಿಷತ್ ನ ಭರವಸೆ ಸಮಿತಿಯೂ ಎರಡೆರಡು ಭಾರಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ಕ್ರಮಕ್ಕಾಗಿ ತಾಕೀತು ಮಾಡಿತ್ತು. ಆ ಸಂದರ್ಭ ಕೈಗಾರಿಕೆಗಳ ಇಂತಹ ಗಂಭೀರ ಅಪರಾಧಿ ಕೃತ್ಯಗಳ ವಿರುದ್ದ ಎಚ್ಚೆತ್ತಂತೆ ಸರಣಿ ಪರಿಶೀಲನೆ, ಕ್ರಮಗಳಿಗೆ ಜಿಲ್ಲಾಡಳಿತ ಮುಂದಾಗಿತ್ತು. ಹಸಿರು ಪೀಠಕ್ಕೆ ಈ ಕುರಿತು ವರದಿಗಳನ್ನು ರವಾನಿಸಿತ್ತು. ದಿನಗಳು ದಾಟಿದಂತೆ ಮತ್ತೆ ಯಥಾ ಪ್ರಕಾರ ಬೈಕಂಪಾಡಿ ಕೈಗಾರಿಕಾ ವಲಯದ ಪಾಮ್ ಆಯಿಲ್, ಫಿಷ್ ಮಿಲ್, ಬಿಯರ್ ಕಂಪೆನಿಗಳ ಕಡೆಯಿಂದ ಮಾರಕ ತ್ಯಾಜ್ಯ ಪಲ್ಗುಣಿಗೆ ತೋಕೂರು ಹಳ್ಳದ ಮೂಲಕ ಹರಿದು ಬರುವುದು ಮುಂದುವರಿದಿತ್ತು. ಇದರಲ್ಲಿ ಪತಂಜಲಿ ಫುಡ್ಸ್ ನ ರುಚಿಸೋಯಾ ಕಂಪೆನಿ ರೆಡ್ ಹ್ಯಾಂಡಾಗಿ ಡಿವೈಎಫ್ಐ, ಹೋರಾಟ ಸಮಿತಿಯ ಕೈಗೆ ಸಿಕ್ಕಿಬಿದ್ದಿತ್ತು. ಪತಂಜಲಿ ಫುಡ್ಸ್ ನ್ನು ಈ ಅಪರಾಧಕ್ಕಾಗಿ ಮುಚ್ಚಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಘಟಕ ಶಿಫಾರಸ್ಸು ಮಾಡಿದ್ದರೂ ಕಂಪೆನಿಯ ಮೇಲೆ ಯಾವುದೇ ಗಂಭೀರ ಕ್ರಮ ಆಗಲಿಲ್ಲ. 

ಈಗ ಕಳೆದ ಎರಡು ವಾರಗಳಿಂದ ತೋಕೋರು ಹಳ್ಳದ ಸ್ಥಿತಿ ಪೂರ್ತಿ ಹದಗೆಟ್ಟಿದ್ದು, ಪಲ್ಗುಣಿಯನ್ನು ಸೇರುವ ಸ್ಥಳದಿಂದ ಕನಿಷ್ಟ ಐದಾರು ಕಿ ಮೀ ಉದ್ದಕ್ಕೂ ತೋಕೂರು ಹಳ್ಳ ಕೊಳೆತು ನಾರುತ್ತಿದೆ. ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಪೆಟ್ರೋ ಕೆಮಿಕಲ್ ವಾಸನೆ ದೂರದಿಂದಲೇ ಮೂಗಿಗೆ ಬಡಿಯುತ್ತಿದೆ. ಈ ಕುರಿತು ಹೋರಾಟ ಸಮಿತಿಯ ಪ್ರಮುಖರು ಸತತವಾಗಿ ತೋಕೂರು ಹಳ್ಳದ ಮೇಲೆ ನಿಗಾ ಇರಿಸಿ ಕೈಗಾರಿಕ ತ್ಯಾಜ್ಯ ಹರಿದು ಬರುವ ಮೂಲದ ಪತ್ತೆಗೆ ಯತ್ನಿಸುತ್ತಿತ್ತು. ಜಿಲ್ಲಾಡಳಿತ, ಮಾಧ್ಯಮದ ಗಮನಕ್ಕೂ ತಂದಿದ್ದು ಯಾವುದೇ ಪ್ರಯೋಜನ ಆಗಿರಲಿಲ್ಲ. 

ಹೋರಾಟ ಸಮಿತಿಯ ಪ್ರಮುಖರು ಮತ್ತೆ ಹುಡುಕಾಟ ನಡೆಸಿದಾಗ mrpl ನ ಮೂರನೆ ಹಂತದ ಕೋಕ್ ಸಲ್ಫರ್ ಘಟಕದ ದಿಕ್ಕಿನಿಂದ ತೋಕೂರು ಹಳ್ಳಕ್ಕೆ ಪೆಟ್ರೋ ಕೆಮಿಕಲ್ ವಾಸನೆಯುಳ್ಳ ಮಾರಕ ಕೈಗಾರಿಕ ತ್ಯಾಜ್ಯ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಬರುವುದು ಪತ್ತೆ ಯಾಗಿದೆ. SEZ ಕಡೆಯಿಂದ ಸುರತ್ಕಲ್ ಕಡೆಗೆ ಸಾಗುವ ಕಾರಿಡಾರ್ ರಸ್ತೆಯಲ್ಲಿ ಸಿಗುವ ಈಗ ದೊಡ್ಡ ಕೆರೆಯಂತೆ ಕಾಣುವ ತೋಕೋರು ಹಳ್ಳದ ನೀರು ವಿಶಾಲವಾಗಿ ಹರಿದು ನಿಲ್ಲುವ ಜಾಗದಲ್ಲಿ ಕಂಪೆನಿ ಕಡೆಯಿಂದ ಈ ವಾಸನೆಯುಕ್ತ ಕೈಗಾರಿಕಾ ತ್ಯಾಜ್ಯ ನೀರು ಹರಿದು ಬಂದು ಫಲ್ಗುಣಿ ನದಿಗೆ ಸೇರುವುದು ಬರಿಗಣ್ಣಿಗೇ ಕಾಣುತ್ತಿದೆ.

ಜಿಲ್ಲಾಧಿಕಾರಿ ಮೌನಕ್ಕೆ ಹೋರಾಟ ಸಮಿತಿ ಆಕ್ರೋಶ

ಈ ಕುರಿತು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳ ಪರಿಶೀನೆ ನಡೆಸುವುದಾಗಲಿ, ಅಧಿಕಾರಿಗಳಿಗೆ ಯಾವುದೆ ಸೂಚನೆ ನೀಡುವುದಾಗಲಿ ಮಾಡದಿರುವುದು ಅವರಿಗೆ ಜಿಲ್ಲೆಯ ಪರಿಸರ,ಜನರ ಆರೋಗ್ಯ, ಹಸಿರು ಪೀಠದ ಆದೇಶಗಳ ಕುರಿತು ಕನಿಷ್ಟ ಕಾಳಜಿಯೂ ಇಲ್ಲದಿರುವುದನ್ನು ಎತ್ತಿತೋರಿಸುತ್ತದೆ ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಜೋಕಟ್ಟೆ, ತೋಕೂರು, ಕಳವಾರು ಭಾಗದಲ್ಲಿ mrpl ನ ಅಸಹನೀಯ ಶಬ್ದ, ವಾಯು ಮಾಲಿನ್ಯಗಳ ಕುರಿತು ಗ್ರಾಮಸ್ಥರು ಸತತವಾಗಿ ದೂರುತ್ತಿದ್ದರೂ, ಜಿಲ್ಲಾಧಿಕಾರಿಗಳು ಯಾವುದನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ, ಜೋಕಟ್ಟೆ, ಕೆಂಜಾರು, ಕಳವಾರು ಭಾಗದಲ್ಲಿ 27 ಎಕರೆ ಜಾಗದಲ್ಲಿ ಹಸಿರು ವಲಯ ನಿರ್ಮಾಣದ ಸರಕಾರಿ ಆದೇಶವನ್ನು mrpl ಜಾರಿಗೊಳಿಸದಿರುವ ದೂರಿನ ಕುರಿತೂ ಜಿಲ್ಲಾಧಿಕಾರಿಗಳಿಗೆ ಯಾವುದೇ ಕಾಳಜಿ ಇಲ್ಲ. ನದಿ, ಪರಿಸರಗಳ ನಾಶ, ಕಂಪೆನಿಗಳ  ಮಾಲಿನ್ಯದ ಕುರಿತು ಸ್ಥಳೀಯ ಸಂಸದ, ಶಾಸಕರ ನಿರ್ಲಿಪ್ತ, ಕಂಪೆನಿ ಪರವಾದ ನೀತಿಯನ್ನೇ ಜಿಲ್ಲಧಿಕಾರಿಗಳೂ ಅಳವಡಿಸಿಕೊಂಡಂತೆ ನಡೆದುಕೊಳ್ಳುತ್ತಿದ್ದಾರೆ. ಈಗಲೂ ಯಾವುದೆ ಕ್ರಮ ಕೈಗೊಳ್ಳದಿದ್ದಲ್ಲಿ ಕಂಪೆನಿಯ ಮಾಲಿನ್ಯದ ಜೊತೆಗೆ ಜಿಲ್ಲಾಧಿಕಾರಿಗಳ ಮೌನದ ವಿರುದ್ದವೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಂದು ಕೈಗಾರಿಕಾ ತ್ಯಾಜ್ಯ ನೀರಿನ ಮೂಲ ಪತ್ತೆ ಹಚ್ಚುವ ತಂಡದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸಮಿತಯ ಪ್ರಮುಖರೂ, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯರೂ ಆದ ಅಬೂಬಕ್ಕರ್ ಬಾವಾ, ಡಿವೈಎಫ್ಐ ಮುಖಂಡ ಶ್ರೀನಾಥ್ ಕುಲಾಲ್, ಇಕ್ಬಾಲ್ ಜೋಕಟ್ಟೆ ಇದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!