ಮಂಗಳೂರು ಪ್ರವೇಶಿಸಿದ ಶೌರ್ಯ ಜಾಗರಣ ರಥಯಾತ್ರೆ
ಶೌರ್ಯ ರಥಕ್ಕೆ ಭವ್ಯ ಸ್ವಾಗತ - 1600 ಕಿ.ಮೀ. ಸಂಚರಿಸಿ ಯಶಸ್ವಿ ಕಾರ್ಯಕ್ರಮ

ಮಂಗಳೂರು : ವಿಶ್ವ ಹಿಂದು ಪರಿಷತ್​ನ 60ನೇ ವರ್ಷಾಚರಣೆ ಪ್ರಯುಕ್ತ ದೇಶಾದ್ಯಂತ ಯುವ ಸಂಘಟನೆಯಾದ ಬಜರಂಗದಳ ನೇತೃತ್ವದಲ್ಲಿ ಸೆ.25 ರಂದು ಚಿತ್ರದುರ್ಗದಲ್ಲಿ ಆರಂಭವಾದ ಶೌರ್ಯ ರಥ ಯಾತ್ರೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ 1600 ಕಿ.ಮೀ. ಸಂಚರಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನಡೆಸಿ ಇದೀಗ ಕರಾವಳಿ ಜಿಲ್ಲೆ ಪ್ರವೇಶಿಸಿದ್ದು, ಪುತ್ತೂರು ಮತ್ತು ಬಂಟ್ವಾಳದಲ್ಲಿ ಯಶಸ್ವಿ ಸಮಾವೇಶಗಳನ್ನು ನಡೆಸಿ ಇದೀಗ ಮಂಗಳೂರು ನಗರ ಪ್ರವೇಶಿಸಿದೆ.

ನಗರದ ಹೊರವಲಯದ ಅಡ್ಯಾರಿನಲ್ಲಿ ರಥಕ್ಕೆರ ಭವ್ಯ ಸ್ವಾಗತ ಕೋರಲಾಯಿತು. ಅಪರಾಹ್ನ ನಗರದಲ್ಲಿ ರಥಯಾತ್ರೆ ನಡೆಯಲಿದ್ದು ಇದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ನಗರ ಸಂಪೂರ್ಣ ಕೇಸರಿಮಯವಾಗಿದ್ದು ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.

ರಥ ಸಾಗುವ ಹಾದಿಯನ್ನು ಬಂಟಿಂಗ್ಸ್‌ ಬ್ಯಾನರುಗಳಿಂದ ಶೃಂಗರಿಸಲಾಗಿದೆ. ಸಂಜೆ 4.30ಕ್ಕೆ ನಗರದ ಕದ್ರಿ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದೆ. ಚಿಂತಕ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದು ಸಾಧು ಸಂತರು, ವಿಹೆಚ್‌ಪಿ, ಬಜರಂಗದಳದ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ಸಮಾರೋಪಗೊಳ್ಳಲಿದೆ. ಸಾಯಿರಾಧ ಗ್ರೂಪ್ಸ್​ ಉಡುಪಿಯ ಮನೋಹರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಮಠದ ಈಶಪ್ರಿಯ ತೀರ್ಥರು, ಮಧ್ಯಪ್ರದೇಶದ ಅಖಿಲೇಶ್ವರಾನಂದ ಮಹಾರಾಜ್​, ಇವರು ಸಾನ್ನಿಧ್ಯ ವಹಿಸಲಿದ್ದಾರೆ. ವಿಎಚ್​ಪಿ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್​, ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!