ಮಂಗಳೂರು: ಮೆಡಿಕಲ್ ಶಾಪ್ ಗೆ ತೆರಳುತ್ತಿದ್ದ ಯುವಕನೋರ್ವನಿಗೆ ಮೂವರು ಯುವಕರ ತಂಡವೊಂದು ಚೂರಿ ಇರಿದು ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.
ಬೆಂಗ್ರೆ ನಿವಾಸಿ ಮುಹಮ್ಮದ್ ಅಕ್ರಂ ಚೂರಿ ಇರಿತಕ್ಕೊಳಗಾದ ಯುವಕನಾಗಿದ್ದು, ಅದೇ ಪರಿಸರದವರೆನ್ನಲಾದ ಸಮದ್, ಇಜಾಝ್ ಮತ್ತು ಇರ್ಫಾನ್ ಹಲ್ಲೆಗೈದ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಅಕ್ರಂ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮುಹಮ್ಮದ್ ಅಕೀಂ ಅವರು ಬೇಂಗ್ರೆ ಸೂಪರ್ ಸ್ಟಾರ್ ಮೈದಾನದ ಬಸ್ ಸ್ಟ್ಯಾಂಡ್ ಬಳಿಯಿಂದಾಗಿ ಪರೋಟ ಪಾಯಿಂಟ್ ಸಮೀಪದ ಮೆಡಿಕಲ್ ಶಾಪ್ ಗೆ ಹೋಗುತ್ತಿದ್ದ ವೇಳೆ ಆರೋಪಿಗಳಾದ ಸಮದ್, ಇಜಾಝ್ ಮತ್ತು ಇರ್ಫಾನ್ ಎಂಬವರು ಏಕಾಏಕಿ ಅಡ್ಡಗಟ್ಟಿ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಹಳೆಯ ದ್ವೇಷದ ಪ್ರತಿಕಾರವಾಗಿ ಕೊಲೆಗೈಯ್ಯುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಅಕ್ರಂ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
0 comment