ಮಂಗಳೂರು: ಮಂಗಳಾದೇವಿ ದೇವಸ್ಥಾನ ವಠಾರದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಹೇಳಿಕೆ ನೀಡಿರುವ ವಿಹಿಂಪ ಪ್ರಾಂತ್ಯ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿತ್ತು. ಈ ಹಿನ್ನಲೆ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ ಜಿಲ್ಲಾಡಳಿತ ಹಿಂದೂಯೇತರರಿಗೂ ಅಂಗಡಿ ಇಡಲು ಅನುಮತಿ ನೀಡಲಾಗಿತ್ತು. ಹೀಗಾಗಿ ಹಿಂದೂ ವ್ಯಕ್ತಿಗಳ ಅಂಗಡಿಗಳ ಮೇಲೆ ಕೇಸರಿ ಧ್ವಜ ಇಟ್ಟು ಎಲ್ಲಾ ಹಿಂದುಗಳು ಸಾಮಗ್ರಿಗಳನ್ನು ಹಿಂದುಗಳ ಅಂಗಡಿಗಳಿಂದಲೇ ಪಡೆದುಕೊಳ್ಳುವಂತೆ ಹೇಳಿಕೆ ನೀಡಿದ್ದರು. ಅ.16ರಂದು ಮಂಗಳಾದೇವಿಯ ರಥಬೀದಿಯ ಹಿಂದೂಗಳ ಸ್ಟಾಲ್ಗಳಿಗೆ ವಿಶ್ವ ಹಿಂದೂ ಪರಿಷತ್ ಭಗವಾನ್ಧ್ಬಜ ಕಟ್ಟಿದ್ದರು.
ಸಾಮರಸ್ಯಕ್ಕೆ ಧಕ್ಕೆ ಮಾಡಿದ್ದಾರೆ ಎಂದು ಪೊಲೀಸರು ಶರಣ್ ಪಂಪ್ ವೆಲ್ ವಿರುದ್ದ ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ , ಐಪಿಸಿ 153A, 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಜರಂಗದಳ ಖಂಡನೆ
"ಮಂಗಳಾದೇವಿ ದೇವಸ್ಥಾನದಲ್ಲಿ ಹಿಂದುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಮತ್ತು ದತ್ತಿಇಲಾಖೆಯ ಕಾನೂನಿನ ಪ್ರಕಾರ ದೇವಸ್ಥಾನದ ವಠಾರ ಮತ್ತು ರಥಬೀದಿಯಲ್ಲಿ ಹಿಂದುಯೇತರರಿಗೆ ಅವಕಾಶವಿಲ್ಲ ಹಾಗಾಗಿ ಹಿಂದೂ ವ್ಯಾಪಾರಸ್ಥರ ಬೆಂಬಲಕ್ಕೆ ನಿಂತ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಮೇಲೆ ಮುಸ್ಲಿಮರ ಓಲೈಕೆಗೆ ಕೇಸು ದಾಖಲಿಸಿದ ಕಾಂಗ್ರೆಸ್ ರಾಜ್ಯಸರಕಾರದ ಹಿಂದೂ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ತಕ್ಷಣ ಹಾಕಿರುವ ಸುಳ್ಳುಕೇಸನ್ನು ಹಿಂದೆ ಪಡೆಯಬೇಕು. ಹಿಂದೂ ಸಂಘಟನೆಯ ನಾಯಕರನ್ನು ಧಮನಿಸಲು ಪ್ರಯತ್ನಿಸಿದರೆ ತಕ್ಕ ಉತ್ತರ ಕೊಡಲಾಗುವುದು" ಎಂದು ವಿಭಾಗ ಸಹಸಂಯೋಜಕ್ ಪುನೀತ್ ಅತ್ತಾವರ ತಿಳಿಸಿದರು.
Comments
0 comment