ಮಂಗಳೂರು: ನಗರದ ಹೊರವಲಯದಲ್ಲಿರುವ ಮುಡಿಪುವಿನಲ್ಲಿ ನಡುರಸ್ತೆಯಲ್ಲಿ ನಡೆದ ಇಫ್ತಾರ್ ಕೂಟದ ಮೇಲೆ ಚುನಾವಣಾ ಆಯೋಗದ ಕಣ್ಣು ಬಿದ್ದಿದ್ದು, ಇದೀಗ ನೋಟಿಸ್ ಜಾರಿಗೊಳಿಸಿದೆ.
ಮುಡಿಪು ಪೇಟೆಯ ರಾಜ್ಯ ಹೆದ್ದಾರಿಯಲ್ಲೇ ಶುಕ್ರವಾರ ಸಂಜೆ 'ಆಟೋ ರಾಜಕನ್ಮಾರ್' ಜಿಲ್ಲಾ ಆಟೋ ಚಾಲಕರ ಸಂಘಟನೆ ಸೌಹಾರ್ದ ಇಫ್ತಾರ್ ಕೂಟ ನಡೆಸಿತ್ತು. ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.
ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ ಅವರಿಗೆ ಲಿಖಿತ ದೂರು ನೀಡಿದೆ. ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು
ಈ ಇಫ್ತಾರ್ ಕೂಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತು ಭಾರೀ ಪರ - ವಿರೋಧ ಚರ್ಚೆಯಾಗಿತ್ತು. ಸದ್ಯ ಚುನಾವಣಾ ಆಯೋಗದಿಂದ ಆಯೋಜಕರಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನೋಟಿಸ್ ಜಾರಿಯಾಗಿದೆ.
Comments
0 comment