ಭಾಸ್ಕರ್ ನಾಯ್ಕ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ0ತೆ ದಾಖಲಾಗಿರುವ ಅಟ್ರಾಸಿಟಿ ಕೇಸ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಗಡಿಗರ ವಿರುದ್ಧ ಕ್ರಮ ಕೈಗೊಳ್ಳದ ಕುರಿತು ಪ್ರಶ್ನಿಸಿ, ವರದಿ ಸಲ್ಲಿಸುವಂತೆ ದಕ್ಷಿಣಕನ್ನಡ ಜಿಲ್ಲಾ ಎಸ್ಪಿಗೆ ಹೈಕೋರ್ಟ್ ಆದೇಶ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತ ಬಾಸ್ಕರ್ ನಾಯ್ಕ್ ಸಪ್ಟೆಂಬರ್ ೩ ರಂದು ಸಂಜೆ ಮಂಗಳೂರಿನಲ್ಲಿ ಯೂಟ್ಯೂಬ್ ಚಾನಲ್ ಗೆ ಸಂರ್ಶನ ನೀಡಿ ವಾಪಸ್ ಬರುವಾಗ ಮಹೇಶ್ ಶೆಟ್ಟಿ ತಿಮರೋಡಿ ,ಮೋಹನ್ ಶೆಟ್ಟಿ ,ಮುಖೇಶ್ ಶೆಟ್ಟಿ,ಶೆಟ್ಟಿ,ನಿತೀನ್ @ ನೀತು, ಪ್ರಜ್ವಲ್ ಕೆವಿ ಗೌಡ, ಪ್ರಮೋದ್ ಶೆಟ್ಟಿ ಮತ್ತಿತರರು ಕಾರು ಅಡ್ಡ ಹಾಕಿ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ನಡೆದು ಒಂಬತ್ತು ದಿನ ಕಳೆದರೂ ಈ ವರೆಗೆ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಯಾಗಿರಲಿಲ್ಲ. ಅಲ್ಲದೆ ಬೆಳ್ತಂಗಡಿ ಮತ್ತು ಕಟೀಲಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಭಾಗವಹಿಸಿದ್ದರು. ಈ ಬಗ್ಗೆ ಬಾಸ್ಕರ್ ನಾಯ್ಕ್ ಹೈ ಕೋರ್ಟ್ ಮೊರೆ ಹೋಗಿದ್ದರು ಎನ್ನಲಾಗಿದೆ. ಅರ್ಜಿ ಪರಿಶೀಲನೆ ನಡೆಸಿದ ಹೈ ಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ತಕ್ಷಣ ಆರೋಪಿಗಳನ್ನು ಬಂಧಿಸಲು ಆದೇಶ ಹೊರಡಿಸಿದೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡಿತ್ತು.
ದೂರುದಾರ ಭಾಸ್ಕರ ನಾಯ್ಕ ನೀಡಿರುವ ದೂರಿನಲ್ಲಿ ಘಟನೆ ನಡೆದ ವೇಳೆ ನೀಡಿರುವ ಸಮಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಇದ್ದರು ಎಂಬ ಬಗ್ಗೆ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸದ್ಯ ಪ್ರಕರಣದ ವಿಚಾರಣೆ ನಡೆಸಲಿರುವ ತನಿಖಾಧಿಕಾರಿಗೆ ಇದೇ ಒಂದು ಮೂಲ ಸಾಕ್ಷಿಯಾಗಲಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಕಷ್ಟ ಸಾಧ್ಯ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ‘ಆ ರೀತಿಯ ಯಾವುದೇ ಆದೇಶ ನಮಗೆ ಬಂದಿಲ್ಲ. ಹೈಕೋರ್ಟ್ ಆದೇಶ ನೀಡಿದೆ ಎಂಬುದು ಗಾಳಿ ಸುದ್ದಿ’ ಎಂದು ಹೇಳಿದ್ದಾರೆ.
ಸದ್ಯ ಈ ಬೆಳವಣಿಗೆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
Comments
0 comment