ಮಂಗಳೂರು: ಶ್ರೀ ಪೊಳಲಿ ಷಷ್ಟಿ ರಥ ಸಮರ್ಪಣಾ ಸಮಿತಿಯ ಮಹಾಸಭೆ ಪೊಳಲಿ ಸರ್ವಮಂಗಳಾ ಹಾಲ್ನಲ್ಲ್ಲಿ ನಡೆಯಿತು.
ಸಮಿತಿಯ ಕೋಶಾಧಿಕಾರಿ ನಾಗೇಶ ದೇವಾಡಿಗ ರಥ ಸಮರ್ಪಣೆಯ ಲೆಕ್ಕಪತ್ರ ಮಂಡಿಸಿದರು. ಷಷ್ಟಿ ರಥ ಸಮರ್ಪಣೆ ಬಳಿಕ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿರುವ 23 ಲಕ್ಷ ರೂ.ನಲ್ಲಿ 20 ಲಕ್ಷವನ್ನು ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಟಿ ರಥ ಸಮಿತಿ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಇಡಲು ನಿರ್ಣಯಿಸಲಾಯಿತು. ಇದರಿಂದ ಬರುವ ವಾರ್ಷಿಕ ಬಡ್ಡಿಯಿಂದ ಮುಂದೆ ರಥದ ನಿರ್ವಹಣೆ ಮಾಡಲು ತೀರ್ಮಾನಿಸಲಾಯಿತು. ಪ್ರತಿವರ್ಷದ ಕಾರ್ಯಕ್ರಮ ನಡೆಸಲು ದೇವಾಡಿಗ ಬಂಧುಗಳ ಸಮಿತಿ ರಚಿಸಿ ಪ್ರತಿವರ್ಷವೂ ಕಾರ್ಯಕ್ರಮ ನಡೆಸಬೇಕೆಂದು ನಿರ್ಣಯಿಸಲಾಯಿತು.
ಉಳಿಯುವ 3,76,124.60 ರೂ. ನಲ್ಲಿ ಷಷ್ಟಿ ರಥದ ಭದ್ರತೆ ದೃಷ್ಟಿಯಿಂದ ದೇವಸ್ಥಾನದ ಆಡಳಿತ ಸಮಿತಿಯ ಅನುಮತಿ ಮೇರೆಗೆ ರಥ ಇಡುವ ಜಾಗದಲ್ಲಿ ಗ್ಲಾಸ್ ಪಾರ್ಮೇಟ್ ಮಾಡಿ ಭಕ್ತರಿಗೆ ರಥ ಕಾಣುವಂತೆ ವ್ಯವಸ್ಥೆ ಕಲ್ಪಿಸಲು ನಿರ್ಣಯಿಸಲಾಯಿತು. ಷಷ್ಟಿ ರಥ ಸಮರ್ಪಣೆ ಕೆಲಸ ಮುಕ್ತಾಯಗೊಂಡಿರುವುದರಿಂದ ಸಮಿತಿಯನ್ನು ವಿಸರ್ಜಿಸಲು ನಿರ್ಣಯಿಸಲಾಯಿತು.
ಸಮಿತಿ ಅಧ್ಯಕ್ಷ ರಾಮದಾಸ್ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ದೇವಾಡಿಗ ಸಮಾಜದ ಪ್ರಮುಖರಾದ ಧರ್ಮಪಾಲ ದೇವಾಡಿಗ, ಅಣ್ಣಯ್ಯ ಶೇರಿಗಾರ್, ಪ್ರವೀಣ ನಾರಾಯಣ ದೇವಾಡಿಗ, ಮೋಹನದಾಸ್ ಹಿರಿಯಡ್ಕ, ರವಿ ಎಸ್.ದೇವಾಡಿಗ, ವಾಸು ದೇವಾಡಿಗ, ಡಾ.ಸುಂದರ ಮೊಯಿಲಿ, ರಾಕೇಶ್ ಕದ್ರಿ ಉಪಸ್ಥಿತರಿದ್ದರು. ರಥ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ ಬಿ.ತುಂಬೆ ಸ್ವಾಗತಿಸಿದರು. ಕೋಶಾಧಿಕಾರಿ ನಾಗೇಶ ದೇವಾಡಿಗ ವಂದಿಸಿದರು.
Comments
0 comment