ಮಂಗಳೂರಿನಲ್ಲಿ ಉಗ್ರ ಬೆಂಬಲಿತ ಗೋಡೆ ಬರಹ ಕೇಸ್: ಬಂಧಿತರಿಗೆ ಐಸಿಸ್ ನಂಟು ಖಾತ್ರಿ
ಮಂಗಳೂರಿನ ಬಂದರು ಠಾಣಾ ವ್ಯಾಪ್ತಿಯ ಕೋರ್ಟ್ ರಸ್ತೆಯ ಪಕ್ಕದ ಕಟ್ಟಡವೊಂದರ ಕಾಂಪೌಂಡ್ ಮೇಲೆ ಉಗ್ರರನ್ನು ಬೆಂಬಲಿಸಿದ ಬರಹವನ್ನು ಬರೆದಿದ್ದರು. ಆನಂತರ, ಕದ್ರಿ ರಸ್ತೆಯಲ್ಲಿರುವ ಗೋಡೆಯೊಂದರ ಮೇಲೂ ಅಂಥದ್ದೇ ಬರಹ ಬರೆಯಲಾಗಿತ್ತು. ಹಾಗಾಗಿ, ಬಂದರು ಠಾಣೆ ಹಾಗೂ ಕದ್ರಿ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದವು. ಆಗ ನಡೆದ ಪ್ರಾಥಮಿಕ ತನಿಖೆಯ ವೇಳೆ, ಶಾರಿಖ್ ಹಾಗೂ ಮಾಜ್ ಮುನೀರ್ ಎಂಬುವರನ್ನು ಪೊಲೀಸರು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಅದು ವಿವಿಧ ಮಾಧ್ಯಮಗಳಲ್ಲಿಯೂ ಪ್ರಕಟವಾಗಿತ್ತು. ಇವರಲ್ಲಿ ಶಾರಿಖ್ ಪರಾರಿಯಾಗಿದ್ದಾನೆಂದು ಹೇಳಲಾಗಿದೆ. ಆತನಿಗಾಗಿ ಶೋಧ ಮುಂದುವರಿದಿದೆ ಎಂದೂ ಹೇಳಲಾಗಿದೆ.
2020ರಲ್ಲಿ ಮಂಗಳೂರಿನ ಕೆಲವು ಗೋಡೆಗಳ ಮೇಲೆ ಉಗ್ರವಾದಿಗಳನ್ನು ಬೆಂಬಲಿಸಿ ಬರೆದಿದ್ದ ಆರೋಪದಡಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ಐಸಿಸ್ ನಂಟು ಹೊಂದಿರುವುದಾಗಿ ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020ರಲ್ಲಿ ಮಂಗಳೂರಿನ ಕೆಲವು ಬಡಾವಣೆಗಳಲ್ಲಿನ ಗೋಡೆಗಳ ಮೇಲೆ ಉಗ್ರವಾದಿಗಳನ್ನು ಬೆಂಬಲಿಸಿದ ಬರಹಗಳನ್ನು ಬರೆದ ಹಿನ್ನೆಲೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆಗಲೇ, ತೀರ್ಥಹಳ್ಳಿಯ ಮೊಹಮ್ಮದ್ ಶಾರಿಖ್ ಹಾಗೂ ಮಾಜ್ ಮುನೀರ್ ಅಹ್ಮದ್ ಎಂಬುವರನ್ನು ಬಂಧಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಯಾಸಿನ್ ಎಂಬಾತನನ್ನೂ ಬಂಧಿಸಲಾಗಿದೆ. ಇವರಲ್ಲಿ ಶಾರಿಖ್ ಎಂಬಾತ ಪರಾರಿಯಾಗಿದ್ದು ಆತನಿಗಾಗಿ ಶೋಧ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಅತ್ತ, ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಗಳೂರು ಉಗ್ರ ಗೋಡೆ ಬರಹಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳಿಗೆ ಉಗ್ರರಿಗೆ ನಂಟು ಇರುವುದು ತಿಳಿದುಬಂದಿದೆ. ಅದರಲ್ಲೂ ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Comments
0 comment