ಬಸ್ನಲ್ಲಿ ಹಣ ಕದ್ದ ಖತರ್ನಾಕ್ ಕಳ್ಳಿ
ತಮಿಳುನಾಡು ಮೂಲದ ಮಹಿಳೆ ಅರೆಸ್ಟ್
ಮಂಗಳೂರು: ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ನಲ್ಲಿ ಸಹ ಪ್ರಯಾಣಿಕ ಮಹಿಳೆಯ ಪರ್ಸ್ನಲ್ಲಿದ್ದ ಹಣ ಎಗರಿಸಿದ್ದ ಖತರ್ನಾಕ್ ಕಳ್ಳಿಯನ್ನು ಬುಧವಾರ ಪುತ್ತೂರು ಪೊಲೀಸ್ ಅರೆಸ್ಟ್ ಮಾಡಿದ್ದಾರೆ.
ಪುತ್ತೂರು ತಾಲೂಕು ಪಂಚಾಯಿತಿಯ ಅಧಿಕಾರಿ ಸುಕನ್ಯಾ ಎಂಬುವವರ ಎಂಟು ಸಾವಿರ ರೂ. ನಗದು ಹಣವಿದ್ದ ಪರ್ಸನ್ನು ಅವರ ಪಕ್ಕದಲ್ಲೇ ಕುಳಿತಿದ್ದ ತಮಿಳುನಾಡಿನ ಸೇಲಂ ನಿವಾಸಿ ಸೆಲ್ವಂ ಎಂಬುವರ ಪತ್ನಿ ನಲ್ಲಮ್ಮ (50) ಎಂಬಾಕೆ ಇಂದು ಪೊಲೀಸ್ ಬಂಧನಕ್ಕೊಳಗಾಗಿದ್ದಾರೆ. ಸುಕನ್ಯಾ ನಿನ್ನೆ ಬಸ್ನಲ್ಲಿ ಬರುತ್ತಿದ್ದಾಗ ಅವರ ಪರ್ಸ್ನಿಂದ ಹಣ ಕಳವಾಗಿತ್ತು. ಕಲ್ಲಡ್ಕದಲ್ಲಿ ಬಸ್ ಹತ್ತಿದ್ದ ತಮಿಳುನಾಡಿನ ಮಹಿಳೆ ಸುಕನ್ಯಾ ಅವರ ಪಕ್ಕವೇ ಕುಳಿತಿದ್ದು ಸುಕನ್ಯಾ ಬ್ಯಾಗ್ ಗಟ್ಟಿಯಾಗಿ ಹಿಡಿದಿದ್ದರೂ ಆಕೆಯ ಬ್ಯಾಗಿನಿಂದ ಚಾಣಾಕ್ಷ ಕಳ್ಳಿ ಹಣ ಕದ್ದಿದ್ದಳು. ಪುತ್ತೂರಿನ ಅಂಚೆ ಕಚೇರಿ ಬಳಿ ಬಸ್ನಿಂದ ಇಳಿದ ಸುಕನ್ಯಾಗೆ ಪರ್ಸ್ ಕಳವಾಗಿರುವುದು ತಡವಾಗಿ ಅರಿವಿಗೆ ಬಂದಿತ್ತು.
ಎಚ್ಚೆತ್ತುಕೊಂಡ ಸುಕನ್ಯಾ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದರು. ಸಿಸಿ ಕ್ಯಾಮರಾ ಸೆರೆ ಹಿಡಿದಿದ್ದ ದೃಶ್ಯಾವಳಿ ಆಧರಿಸಿ ಆರೋಪಿ ಮಹಿಳೆಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ ಪುತ್ತೂರು ನಗರ ಪೊಲೀಸರು ಆಕೆಯನ್ನು ಬುಧವಾರ ಪತ್ತೆ ಮಾಡಿದ್ದಾರೆ. ಬಂಧಿತ ನಲ್ಲಮ್ಮ ಪರಿಣತಿ ಹೊಂದಿದ ಕಳ್ಳಿಯಾಗಿದ್ದು, ಮಂಗಳೂರು ವ್ಯಾಪಿಯಲ್ಲಿ ಅಲೆಮಾರಿ ಜೀವನ ಸಾಗಿಸುತ್ತ ಬಸ್ನಲ್ಲಿ ಪ್ರಯಾಣಿಸುವವರ ಹಾಗೂ ಜನಸಂದಣಿಯ ಜಾಗದಲ್ಲಿ ಸೇರಿದ ಮಹಿಳೆಯರ ಪರ್ಸ್ ಕಳ್ಳತನ ಕೃತ್ಯ ನಡೆಸುವ ಕಾಯಕ ನಡೆಸುತ್ತಿದ್ದಳೆಂಬ ಮಾಹಿತಿ ಲಭಿಸಿದೆ. ಕಳವು ಮಾಡಿರುವ ದೃಶ್ಯಾವಳಿಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Comments
0 comment