ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಕೆನಡಾ ಮತ್ತು ಭಾರತದ ಸಂಬಂಧ ಹದಗೆಟ್ಟಿದ್ದು, ಇದರ ಬೆನ್ನಲ್ಲಿಯೇ ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನಿ ಉಗ್ರನ ಹತ್ಯೆಯಾಗಿದೆ. ಇಂದು ಬೆಳಗ್ಗೆ ನಡೆದ ಗ್ಯಾಂಗ್ ವಾರ್ನಲ್ಲಿ ಕೆನಡಾದಲ್ಲಿನ ಖಲಿಸ್ತಾನಿ ಉಗ್ರ ಸುಖ್ದೋಲ್ ಸಿಂಗ್ ಅಲಿಯಾಸ್ ಸುಖ ದುನೆಖೆ ಹತ್ಯೆಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇನ್ನು ಹತ್ಯೆಗೀಡಾದ ಸುಖ ದುನೆಖೆ ಕೆನಡಾದಲ್ಲಿ ನಡೆಯುತ್ತಿದ್ದ ಖಲಿಸ್ತಾನ್ ಚಳವಳಿಯ ಭಾಗವಾಗಿದ್ದ ಎಂದು ತಿಳಿದುಬಂದಿದೆ. ಈತ ಕೆನಡಾ ಮೂಲದ ಗ್ಯಾಂಗ್ಸ್ಟರ್ ಅರ್ಶ್ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಜೊತೆ ನಿಕಟ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಜೂನ್ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಭಾರತದ ಸರ್ಕಾರಿ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೌಸ್ ಆಫ್ ಕಾಮನ್ಸ್ನಲ್ಲಿ ಬಹಿರಂಗ ಆರೋಪ ಮಾಡಿದ್ದರು. ಇದರ ಬೆನ್ನಲ್ಲಿಯೇ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಟ್ರುಡೋ ಗಂಭೀರ ಆರೋಪದ ಬಳಿಕ ಉಭಯ ದೇಶಗಳು ಪರಸ್ಪರ ರಾಯಭಾರಿಗಳನ್ನು ಅಮಾನತು ಮಾಡಿದ್ದವು. ಜೊತೆಗೆ ಕೆನಡಾದ ಪ್ರಧಾನಿಯ ಆರೋಪಗಳನ್ನು ಭಾರತ ನಿರಾಕರಿಸಿದ್ದು, ಆರೋಪಗಳು ಅಸಂಬದ್ಧ ಮತ್ತು ಪ್ರೇರಿತ ಎಂದಿದೆ.
ಇದರ ಬೆನ್ನಲ್ಲಿಯೇ ಕೆನಡಾದಲ್ಲಿರುವ ಭಾರತೀಯರಿಗೆ ಎಚ್ಚರಿಕೆಯನ್ನು ಕೂಡ ಭಾರತ ಸರ್ಕಾರ ನೀಡಿತ್ತು. ಕೆನಡಾದಲ್ಲಿ ರಾಜಕೀಯ ಪ್ರೇರಿತ ದ್ವೇಷದ ದಾಳಿಗಳು ನಡೆಯುತ್ತಿವೆ. ಭಾರತೀಯ ನಾಗರೀಕರು ಎಲ್ಲಿಗಾದರೂ ಪ್ರಯಾಣಿಸುವ ವೇಳೆ ಎಚ್ಚರ ವಹಿಸುವಂತೆ ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ನೀಡಿತ್ತು. ಈಗ ಮತ್ತೊಬ್ಬ ಖಲಿಸ್ತಾನಿ ಉಗ್ರನ ಹತ್ಯೆಯಾಗಿರುವುದು ಕೆನಡಾದಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮ ಸ್ಥಿತಿಗೆ ತೆರಳುವ ಸಾಧ್ಯತೆ ಇದೆ.
Comments
0 comment