ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಿಲ್ಲಾಡಳಿತದಿಂದ ಶಾಸಕರ ಹಕ್ಕುಗಳಿಗೆ ಚ್ಯುತಿಯಾಗುವ ಘಟನೆಗಳು ನಡೆಯುತ್ತಿದ್ದು, ಮೂರು ದಿನಗಳೊಳಗೆ ಸಮಸ್ಯೆ ಇತ್ಯರ್ಥಪಡಿಸದಿದ್ದಲ್ಲಿ ಆಗಸ್ಟ್ 13 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು ಧರಣಿ ಕುಳಿತುಕೊಳ್ಳಲಿದ್ದಾರೆ.
ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಉಮಾನಾಥ ಕೋಟ್ಯಾನ್, ಯು.ರಾಜೇಶ್ ನಾಯ್ಕ, ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್ ಮತ್ತು ಪ್ರತಾಪ್ಸಿಂಹ ನಾಯಕ್ ಅವರು ನಗರದಲ್ಲಿ ಗುರುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಜುಲೈ 31ರಂದು ಮೂಡಬಿದಿರೆಯ ಇರುವೈಲ್ ಗ್ರಾ.ಪಂಚಾಯಿತಿಯ ರಾಜೀವ ಗಾಂಧಿ ಸೇವಾಕೇಂದ್ರ ಹಾಗೂ ಪಂಚಾಯಿತಿ ಕಚೇರಿ ಕಟ್ಟಡ ಉದ್ಘಾಟನೆ ಇತ್ತು.
ಜಿಲ್ಲಾಧಿಕಾರಿ ಕಚೇರಿಯಿಂದಲೇ ಶಿಷ್ಟಾಚಾರ (ಪ್ರೊಟೋಕಾಲ್) ಪ್ರಕಾರ ಆಮಂತ್ರಣ ಪತ್ರಿಕೆ ಅಚ್ಚಾಗಿತ್ತು. ಆದರೆ ಉದ್ಘಾಟನೆಗೆ ಎರಡು ದಿನ ಇರುವಾಗ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ಬಂದಿದೆ. ಮೂಡಬಿದಿರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಅವರನ್ನು ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಕಾರಣ ನೀಡಿ ಅಮಾನತುಗೊಳಿಸಲಾಗಿದೆ ಎಂದು ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ನನ್ನ ಕ್ಷೇತ್ರದಲ್ಲೂ ಇದೇ ರೀತಿ ಹಕ್ಕು ಚ್ಯುತಿಯ ಕೆಲಸ ಆಗಿದೆ. ಆಗಸ್ಟ್ 4ರಂದು ಇರ್ವತ್ತೂರು ಗ್ರಾ.ಪಂ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ ಇತ್ತು. ಶಿಷ್ಟಾಚಾರ ಪ್ರಕಾರ ಅದರ ಆಮಂತ್ರಣ ಪತ್ರಿಕೆ ಮುದ್ರಣ ಆಗಿತ್ತು. ಆದರೆ ಆ.3ರಂದು ಪಿಡಿಓ ಕಾರ್ಯಕ್ರಮ ರದ್ದು ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಇಒ ಹಾಗೂ ಪಿಡಿಓ ಅವರ ಅಮಾನತು ಆದೇಶ ತಕ್ಷಣ ಹಿಂಪಡೆಯಬೇಕು ಹಾಗೂ ಶಾಸಕರ ಸಾಂವಿದಾನಿಕ ಹಕ್ಕುಗಳಿಗೆ ಜಿಲ್ಲಾಡಳಿತ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸಬೇಕು ಎಂದು ಶಾಸಕರು ಆಗ್ರಹಿಸಿದರು.
Comments
0 comment