ಸುಳ್ಯ: ವಿಕ್ರಂ ಫೌಂಡೇಶನ್ ಹಾಗೂ ಹಿಂದು ಜಾಗರಣ ವೇದಿಕೆ ವತಿಯಿಂದ ಮಂಡೆಕೋಲಿನಲ್ಲಿ ಮೂರು ಅಶಕ್ತ ಕುಟುಂಬಗಳಿಗೆ ನಿರ್ಮಿಸಲಾದ ಮನೆಯ ಗೃಹಪ್ರವೇಶ ಭಾನುವಾರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ, ವಿಕ್ರಂ ಫೌಂಡೇಶನ್ನ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ, ಸೇವೆಯಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಸೇವೆ ಇರಬೇಕು. ಭವಿಷ್ಯದಲ್ಲಿ ಇದೇ ಊರಿನಲ್ಲಿ ಮತ್ತೆ ಮೂರು ಕುಟುಂಬಗಳಿಗೆ ಮನೆ ಕಟ್ಟುವ ಕನಸಿದ್ದು, ಆ ಸಂದರ್ಭದಲ್ಲೂ ಎಲ್ಲರೂ ಒಗ್ಗಟ್ಟಾಗಿ ಸಹಕಾರ ನೀಡಬೇಕು ಎಂದು ಹೇಳಿದರು.
ಆರೆಸ್ಸೆಸ್ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮನೆಯ ಕೀ ಹಸ್ತಾಂತರಿಸಿ ಮಾತನಾಡಿ ಎಲ್ಲ ಕಡೆ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದ್ದರೆ ಇಲ್ಲಿ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಮಹತ್ಕಾರ್ಯ ಕೈಗೂಡಿದೆ. ಅಶಕ್ತರಿಗೆ ಮನೆ ಕಟ್ಟಿ ಕೊಡುವ ಚಿಂತನೆ ರಾಷ್ಟ್ರವ್ಯಾಪಿಯಾಗಿ ಪಸರಿಸಲಿ ಎಂದು ಆಶಯ ವ್ಯಕ್ತಪಡಿಸಿದರು. ಹಿರಿಯರಾದ ಪಾತಿಕಲ್ಲು ಚಂದಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಪ್ರಾಂತ ಸಂಯೋಜಕ ಕೇಶವಮೂರ್ತಿ, ಅಡ್ಪಂಗಾಯದ ಅಯ್ಯಪ್ಪ ಸ್ವಾಮಿ ಮಂದಿರದ ಸ್ಥಾಪಕ ಶಿವಪ್ರಕಾಶ್, ಮಹೇಶ್ ಉಗ್ರಾಣಿಮನೆ, ಲಕ್ಷ್ಮಣ ಉಗ್ರಾಣಿಮನೆ ಹಾಜರಿದ್ದರು. ಹಿರಿಯರಾದ ಚಂದಪ್ಪ ಗೌಡ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಮನೆ ನಿರ್ಮಿಸಿದ ಮಹೇಶ್ ವಿಕ್ರಮ್ ಹೆಗ್ಡೆ ಹಾಗೂ ಸಹಕಾರ ನೀಡಿದ ಸುಭಾಶ್ ಮಾಡ, ಗುತ್ತಿಗೆದಾರ ಕುಶಾಲಪ್ಪರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕೇಶವ, ಮಾಧವ, ಮಧುಕರ ಮಂಡೆಕೋಲು ಗ್ರಾಮದ ಪೇರಾಲು ಸುಂದರಿ, ಕನ್ಯಾನದ ಸತ್ಯವತಿ ಕೃಷ್ಣಪ್ಪ ಹಾಗೂ ಮೈಲೆಟ್ಟಿಪಾರೆಯ ಚಲ್ಲಿಯವರಿಗೆ ತಲಾ 6 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಬೆಳಗ್ಗೆ ಮೂರು ಮನೆಯಲ್ಲಿಯೂ ಗಣಹೋಮ ನಡೆಯಿತು. ಮೂರು ಮನೆಗಳಿಗೆ ಕೇಶವ, ಮಾಧವ ಹಾಗೂ ಮಧುಕರ ಎಂದು ನಾಮಕರಣ ಮಾಡಲಾಗಿದೆ.
Comments
0 comment